ಉದಯವಾಹಿನಿ, ಬೆಳ್ತಂಗಡಿ: ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಬಳಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ಯುವಕರು ವಗ್ಗ ಕಾಡಬೆಟ್ಟುವಿನ ಜಾಯ್ಸನ್ (19), ಕುಪ್ಪೆ ಪದವಿನ ಲಾರೆನ್ಸ್ (21), ಪುಂಜಾಲಕಟ್ಟೆ ಬಸವನಗುಡಿಯ ಸೂರಜ್ (19) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮೂವರೂ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳು. ವೇಣೂರು ಚರ್ಚಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಪಾಠಿಯ ಮನೆಗೆ ಬಂದಿದ್ದರು.
ಕಿಂಡಿ ಅಣೆಕಟ್ಟು ನೋಡಲು ಹೋಗಿದ್ದ ವೇಳೆ ಈ ಮೂವರು ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ನದಿ ನೀರಿನಲ್ಲಿ ಮುಳುಗಿ ಮೂವರೂ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬನಿಗೆ ಮಾತ್ರ ಈಜು ಬರುತ್ತಿತ್ತು. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ.
