ಉದಯವಾಹಿನಿ, ಮೇಲುಕೋಟೆ: ಹೊಸ ವರ್ಷಾರಂಭದ ಮೊದಲ ದಿನವಾದ ಬುಧವಾರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯಗಳಲ್ಲಿ ವೈರಮುಡಿ ಜಾತ್ರೆಯ ನೆನಪಾಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಮುಗಿಬಿದ್ದು ದೇವರ ದರ್ಶನ ಪಡೆದರು. ಮುಂಜಾನೆಯಿಂದಲೇ ಪಂಚ ಕಲ್ಯಾಣಿಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ಕಲ್ಯಾಣಿ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯಕ್ಕೆ ತೆರಳಿದರು. ಸನ್ನಿಧಿಗಳಲ್ಲಿ ಧನುರ್ಮಾಸದ ನಿಮಿತ್ತ ಸುರ್ಯೋದಯಕ್ಕೂ ಮುನ್ನ ಪೂಜೆ ಕೈಂಕರ್ಯ ಆರಂಭವಾಗಿತ್ತು. ವಿವಿಧ ಬಗೆಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಚೆಲುವನಾರಾಯಣ ಸ್ವಾಮಿಯ ದರ್ಶನಕ್ಕೆ ಸುಡುಬಿಸಿಲು ಲೆಕ್ಕಿಸದೆ ದೇವಾಲಯ ಮುಂದೆ ಸರತಿ ಸಾಲಿನಲ್ಲಿ ನಿಂತು. ಗೋವಿಂದ ಗೋವಿಂದ ಜಯಘೋಷ ಕೂಗುತ್ತಾ ದೇವರ ದರ್ಶನ ಪಡೆದರು.
