ಉದಯವಾಹಿನಿ, ಉಡುಪಿ: ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದರೆ ಅವರನ್ನು ಸ್ವೀಕರಿಸುವುದು ತಪ್ಪಲ್ಲ. ಆದರೆ ಮೊನ್ನೆ ನಕ್ಸಲರು ಸರ್ಕಾರಕ್ಕೆ ಶರಣಾದಂತೆ ತೋರಿಲ್ಲ. ಬದಲಾಗಿ ಸರ್ಕಾರವೇ ನಕ್ಸಲರಿಗೆ ಶರಣಾದಂತೆ ಭಾಸವಾಯಿತು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಈ ಹಿಂದೆ ಶರಣಾದವರಿಗೆ ಸೌಲಭ್ಯಗಳು ಲಭಿಸಿಲ್ಲ. ಅಲ್ಲದೆ ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಡೆದಿಲ್ಲ ಎಂದರು. ಸರ್ಕಾರವೇ ನಕ್ಸಲರಿಗೆ ಶರಣಾದಂತಹ ನೀತಿಯಿಂದಾಗಿ ಇನ್ನು ಮುಂದೆ ನಕ್ಸಲರು ಹೆಚ್ಚಾಗುವ ಆತಂಕವೂ ಕಾಡುತ್ತಿದೆ ಎಂದು ಹೇಳಿದರು.
