ಉದಯವಾಹಿನಿ, ಕೊಪ್ಪಳ: ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಇಲ್ಲಿನ ಗವಿಸಿದ್ದೇಶ್ವರ ಮಠದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ತರಹೇವಾರಿ ಹೂಗಳು ಹಾಗೂ ವಿದ್ಯುತ್‌ ದೀಪದಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ಗವಿಸಿದ್ಧೇಶ್ವರನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಈ ಸುಂದರ ದೃಶ್ಯಗಳನ್ನು ಕಣ್ಣುಂಬಿಕೊಳ್ಳಲು ಭಾನುವಾರ ರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ತೆಪ್ಪೋತ್ಸವಕ್ಕೆ ಆಗಮಿಸಿ ಗವಿಸಿದ್ದೇಶ್ವರರ ಬಳಿ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ಎನ್ನುವ ನಂಬಿಕೆ ಭಕ್ತರದ್ದು. ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಬಾಳೆ, ಕಬ್ಬು, ಮಾವಿನ ತಳಿರು ತೋರಣ ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಮಂಗಳವಾದ್ಯಗಳೊಂದಿಗೆ ತೆಪ್ಪವನ್ನು ಕೆರೆಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಹುಟ್ಟು ಹಾಕಿ ಸಾಗಿಸಲಾಯಿತು.
ತೆಪ್ಪ ಮುಂದಕ್ಕೆ ಸಾಗುತ್ತಿದ್ದಂತೆ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು. ಈ ವೇಳೆ ಮೃದುವಾದ ಧ್ವನಿಯಲ್ಲಿ ಮೊಳಗಿದ ‘ಗವಿಸಿದ್ದೇಶ್ವರ ಪಾಹಿಮಾಮ್… ಪಾಹಿಮಾಮ್..’ ಎನ್ನುವ ಸ್ತೋತ್ರ ಗಮನ ಸೆಳೆಯಿತು. ಇದಕ್ಕೂ ಮೊದಲು ಕೆರೆಯ ಮಧ್ಯಭಾಗದಲ್ಲಿ ನಿಂತುಕೊಂಡು ಮಠದ ಅರ್ಚಕರು ತುಂಗಾರತಿ ಮಾಡಿದರು. ಅವರು ಆರತಿ ಮಾಡುತ್ತಿದ್ದಾಗ ಆ ಬೆಳಕು ಕೆರೆಯ ನೀರಿನಲ್ಲಿ ಬಿದ್ದ ಪ್ರತಿಬಿಂಬ ಆಕರ್ಷಕವಾಗಿತ್ತು.

Leave a Reply

Your email address will not be published. Required fields are marked *

error: Content is protected !!