ಉದಯವಾಹಿನಿ, ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸ್ಶಳೀಯರ ಸಹಕಾರ ನೀಡಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೂರ್ವನಿಯೋಜಿತದಂತೆ ಕೇವಲ 5 ನಿಮಿಷದಲ್ಲಿ ಸುಮಾರು 10 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ಪರಾರಿಯಾಗಿರುವ ದುಷ್ಕರ್ಮಿಗಳ ಜಾಡು ಹಿಡಿದು ಪೊಲೀಸರ ತಂಡ ಶೋಧ ಕಾರ್ಯ ನಡೆಸಿರುವ ನಡುವೆಯೇ ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣವೆಂದು ಬಿಂಬಿತವಾಗಿರುವ ಈ ಕೃತ್ಯಕ್ಕೆ ಸ್ಥಳೀಯರು ಮತ್ತು ಬ್ಯಾಂಕ್ನ ಬಗ್ಗೆ ಸಂಪೂರ್ಣ ತಿಳಿದಿರುವವರು ಸಹಕಾರ ನೀಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದರೋಡೆಗೆ ನಿಗದಿಪಡಿಸಿದ್ದ ಸಮಯ ಮತ್ತು ಪರಾರಿಯಾಗಲು ಬಳಸಿದ್ದ ತಂತ್ರಗಾರಿಕೆ ಪತ್ತೆಹಚ್ಚುವುದು ಪೊಲೀಸರಿಗೆ ಈಗ ದೊಡ್ಡ ಸವಾಲಾಗಿದೆ. ದರೋಡೆ ಕೋರರು ಕೇರಳ ಪ್ರವೇಶಿಸಿ ನಂತರ ನಾಪತ್ತೆಯಾಗಿದ್ದು, ಅವರು ಜಲಮಾರ್ಗದ ಮೂಲಕ ತಮಿಳುನಾಡಿಗೆ ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರ ಒಂದು ತಂಡ ಅಲ್ಲಿ ಕಾರ್ಯಾಚರಣೆ ಆರಂಭಿಸಿದೆ.
