ಉದಯವಾಹಿನಿ: ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್,ಬಂಧನದ ತನಿಖೆ ವೇಳೆ ಪೊಲೀಸರು ವಶಪಡಿಸಿಕೊಂಡ ದೊಡ್ಡ ಮೊತ್ತದ ಹಣವನ್ನು ಮರಳಿ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನದ ಬಳಿಕ ಅವರಿಂದ ಬರೋಬ್ಬರಿ ೩೭ ಲಕ್ಷ ರೂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಬಳಸಲಾಗಿತ್ತು ಎಂದು ಪೊಲೀಸರು ಆರೋಪ ಮಾಡಿದ್ದರು. ರೇಣುಕಾ ಸ್ವಾಮಿ ಕೊಲೆಯನ್ನು ತಾವು ಮಾಡಿದ್ದಾಗಿ ಒಪ್ಪಿಕೊಳ್ಳಲು ಹೊರಗಡೆಯಿಂದ ಕರೆಸಲಾಗಿದ್ದ ಮೂವರಿಗೆ ಅದಾಗಲೇ ಒಂದಿಷ್ಟು ಹಣವನ್ನು ನೀಡಲಾಗಿತ್ತು. ಹಣ ವಶಪಡಿಸಿಕೊಂಡಿದ್ದ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು, ವಶಪಡಿಸಿಕೊಂಡ ಹಣ, ಸಾಲವಾಗಿ ನೀಡಲಾಗಿದ್ದ ಹಣ ಅದು ಎಂದು ವಾದಿಸಿದ್ದರು. ಮೋಹನ್ ರಾಜ್ ಎಂಬುವರಿಗೆ ಸಾಲದ ರೂಪದಲ್ಲಿ ನಟ ದರ್ಶನ್ ಹಣ ನೀಡಿದ್ದರು. ಆ ಹಣವನ್ನು ಮೋಹನ್ ರಾಜ್, ದರ್ಶನ್‌ಗೆ ಮರಳಿದ್ದರು. ಆ ಹಣವನ್ನು ದರ್ಶನ್ ತಮ್ಮ ನಿವಾಸದಲ್ಲಿ ಇರಿಸಿಕೊಂಡಿದ್ದರು. ಆ ಹಣ ಕೊಲೆ ಮುಚ್ಚಿಹಾಕಲು ಬಳಸಲೆಂದು ಇರಿಸಿಕೊಂಡಿದ್ದ ಹಣ ಅಲ್ಲ ಎಂದು ವಾದ ಮಾಡಿದ್ದರು.
ಇದೀಗ ೫೭ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ದರ್ಶನ್, ತಮ್ಮ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಒಂದೊಮ್ಮೆ ಪೊಲೀಸರು ಅಥವಾ ಆದಾಯ ತೆರಿಗೆ ಇಲಾಖೆ ಆಕ್ಷೇಪಣೆ ಸಲ್ಲಿಸಿದಲ್ಲಿ ಮತ್ತೊಂದು ಸುತ್ತು ವಾದ, ವಿಚಾರಣೆಗಳು ನಡೆದ ಬಳಿಕ ಆ ಹಣ ದರ್ಶನ್‌ಗೆ ಸೇರಲಿದೆಯೇ ಅಥವಾ ಪೊಲೀಸರ ಬಳಿ ಸಾಕ್ಷಿಯಾಗಿಯೇ ಉಳಿದುಕೊಳ್ಳಲಿದೆಯೇ ತಿಳಿಯಲಿದೆ.

Leave a Reply

Your email address will not be published. Required fields are marked *

error: Content is protected !!