ಉದಯವಾಹಿನಿ, ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾವು ಬಿಜೆಪಿ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕೆ? ಎಂದು ಭಿನ್ನಮತೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕೆಂಡ ಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಕುರಿತು ನಾನು ವಿಜಯೇಂದ್ರನಂತಹ ಬಚ್ಚಾ ಅವರಿಂದ ನಾನು ಕಲಿಯಬೇಕಿಲ್ಲ. ಏಕೆಂದರೆ ಅವರಪ್ಪ ಯಡಿಯೂರಪ್ಪನವರ ಜೊತೆ ಪಕ್ಷ ಕಟ್ಟಿದ್ದೇನೆ. ನಾನು ಬಿಜೆಪಿಯಲ್ಲಿ ಸಂಘಟನೆ ಮಾಡುತ್ತಿದ್ದಾಗ ವಿಜಯೇಂದ್ರ ಚಡ್ಡಿ ಹಾಕಿ ತಿರುಗಾಡುತ್ತಿದ್ದ ಎಂದು ಟೀಕಾ ಪ್ರಹಾರ ನಡೆಸಿದರು.
ನೀವು ನಮನ್ನು ಪಕ್ಷದಿಂದ ಹೊರ ಹಾಕುವುದಿದ್ದರೆ ಹಾಕಿ ನಮದೇನೂ ತಕರಾರು ಇಲ್ಲ. ಎಲ್ಲದಕ್ಕೂ ನಾವು ಸಜ್ಜಾಗಿದ್ದೇವೆ. ನಮಗೆ ಯಾರ ಭಯವೂ ಇಲ್ಲ. ನಿಮಪ್ಪನ ಮನೆಯಲ್ಲಿ ಭಯ ಇರಬಹುದೇ ಹೊರತು ನಮಗೇನೂ ಭಯವಿಲ್ಲ ಎಂದು ತಿರುಗೇಟು ಕೊಟ್ಟರು.
ನಾವು ಎಲ್ಲದಕ್ಕೂ ಸಿದ್ದರಾಗಿಯೇ ಯುದ್ಧ ಸಾರಿದ್ದೇವೆ. ಮುಂದೇನಾಗುತ್ತದೆಯೋ ಗೊತ್ತಿಲ್ಲ. ಬಿಜೆಪಿಯೊಳಗೆ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು. ವಿಜಯೇಂದ್ರ ಕಾರ್ಯ ವೈಖರಿ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಪಕ್ಷದ ಹಿರಿಯರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅವರ ಚೇಲಾಗಳಿಗೆ ಸಮಾಧಾನ ಇದ್ದರೂ ಇರಬಹುದು ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರ ಅವರ ಅಸಲಿ ಬಣ್ಣ ಬಯಲಾಗುತ್ತಿದೆ. ಜಿಲ್ಲಾಧ್ಯಕ್ಷರ ನೇಮಕ ಹೇಗೆ ಆಗಿದೆ ಎಲ್ಲಾ ವಿಚಾರಗಳೂ ಗೊತ್ತಾಗುತ್ತಿವೆ. ವಿಜಯೇಂದ್ರ ಅವರಿಗೆ ಸಲಹೆ ಕೊಡುತ್ತೇನೆ ಯಾಕೆ ಸುಮನೆ ಸರ್ಕಸ್ ಮಾಡಿತ್ತೀರಿ ನೇರವಾಗಿ ರಾಧಾ ಮೋಹನ್ ದಾಸ್ ಅವರ ಬಳಿ ಮಾತಾಡಿ. ಯಾವ ನಿಟ್ಟಿನಲ್ಲಿ ಪಕ್ಷ ಹೋಗುತ್ತಿದೆ ನೋಡಿ. ಅಪ್ಪ, ಮಗ ಮತ್ತೊಬ್ಬ ಮಗ ನೀವೆ ಎಲ್ಲಾ ಇದ್ದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
