ಉದಯವಾಹಿನಿ, ಬೆಂಗಳೂರು: ಉದ್ಘಾಟನೆ ಭಾಗ್ಯ ಕಾಣದೇ ಕಾಯುತ್ತಿರುವ ಇಂದಿರಾ ಕ್ಯಾಂಟೀನ್;೬ ತಿಂಗಳಾದರೂ ಸಾರ್ವಜನಿಕ ಉಪಯೋಗಕ್ಕೆ ಬಾರದ ಇಂದಿರಾ ಕ್ಯಾಂಟೀನ್; ಹಲವು ಆರೋಪ ಪ್ರತಿಭಟನೆ ನಡುವೆ ಶೀಘ್ರವಾಗಿ ಕಟ್ಟಡ ನಿರ್ಮಾಣವಾದರೂ ಕಾರ್ಯರೂಪಕ್ಕೆ ಬಂದಿಲ್ಲ.
ವಿಜಯಪುರ;ಪಟ್ಟಣದ ಅಂಗತಟ್ಟಿ ನಂಜುಂಡಪ್ಪ ವೃತ್ತದ ಬಳಿ ಪುರಸಭೆಯಿಂದ ರೋಟರಿ ಶಾಲೆಗೆ ೪೦ ವರ್ಷಗಳ ಹಿಂದೆ ರೆಸಲ್ಯೂಶನ್ ಮಾಡಿ, ನೀಡಿದ್ದ ರೋಟರಿ ಶಾಲಾ ಮಕ್ಕಳ ಆಟದ ಮೈದಾನವಾಗಿ ಬಳಕೆಯಾಗುತ್ತಿದ್ದ ಜಾಗವನ್ನು ಪುರಸಭೆ ಸಿಬ್ಬಂದಿ ವರ್ಗದವರು ಸಾರ್ವಜನಿಕರ ಪ್ರತಿಭಟನೆಗಳ ನಡುವೆ ರಾತ್ರೋರಾತ್ರಿ ರೋಟರಿ ಶಾಲೆಯ ಮಕ್ಕಳ ಕ್ರೀಡಾ ಉಪಕರಣಗಳನ್ನು ಹಾಗೂ ಕಾಂಪೌಂಡ್ ಅನ್ನು ಜೆ.ಸಿ.ಬಿ ಮೂಲಕ ಕೆಡವಿ ಜಾಗ ವಶಪಡಿಸಿಕೊಂಡು, ನಂತರ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ೬ ತಿಂಗಳಾದರೂ ಉದ್ಘಾಟನೆ ಭಾಗ್ಯವಿಲ್ಲದೇ ಕಾಯುತ್ತಿದ್ದು, ಇದೀಗ ಕುಡುಕರ ಪುಂಡು ಪೋಕರಿಗಳ ಅಡ್ಡೆಯಾಗುವುದರೊಂದಿಗೆ ಹಲವಾರು ಮಂದಿ ಮೂತ್ರ ವಿಸರ್ಜನೆಗೂ ಬಳಸಿಕೊಳ್ಳುತ್ತಿದ್ದಾರೆ.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ಅನ್ನಭಾಗ್ಯ ಹಸಿವುಮುಕ್ತ ಕರ್ನಾಟಕ ಇದರ ಅಡಿಯಲ್ಲಿ ಯಾವ ಒಬ್ಬ ವ್ಯಕ್ತಿಯೂ ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಕಾರ್ಯರೂಪಕ್ಕೆ ಬಂದರೆ ಜೊತೆಗೆ ನಿರ್ಗತಿಕರು ಕಷ್ಟಪಡುವ ಕೂಲಿಕಾರ್ಮಿಕರಿಗೆ ಊಟದ ತೊಂದರೆಯಾಗಬಾರದೆಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಸರ್ಕಾರ ಕ್ಯಾಂಟೀನ್ ಪ್ರಾರಂಭಿಸಿತು. ವಿಜಯಪುರ ಪಟ್ಟಣದಲ್ಲೂ ಕಳೆದ ಆರು ತಿಂಗಳ ಹಿಂದೆ ಹಲವು ವಿರೋಧ ಪ್ರತಿಭಟನೆ ನಡುವೆ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಈವರೆಗೂ ಉದ್ಘಾಟನೆ ಭಾಗ್ಯ ಕಾಣದೇ, ಕ್ಯಾಂಟೀನ್ ಅಗತ್ಯವಿರುವ ಸಾರ್ವಜನಿಕರು ಒಂದೆಡೆ ಮಕ್ಕಳ ಆಟದ ಮೈದಾನಕ್ಕೆ ಕೊಡಲಿ ಪೆಟ್ಟು ಹಾಕಿದ್ದಕ್ಕೆ ಕೆಲವರು ಸ್ಥಳೀಯ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
