ಉದಯವಾಹಿನಿ, ನವದೆಹಲಿ : ಇಪ್ಪತ್ತೇಳು ವರ್ಷಗಳ ಬಳಿಕ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿಯ ಶಾಸಕಾಂಗ ಸಭೆ ಇಂದು ಸಂಜೆ ನಡೆಯಲಿದ್ದು, ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಯಾರ ಕೈಗೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಇಂದು ಸಂಜೆ 7 ಗಂಟೆಗೆ ಪಕ್ಷದ ಶಾಸಕಾಂಗ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಲಿದ್ದು ಅಲ್ಲಿ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ನಂತರ ಪಕ್ಷದ ವೀಕ್ಷಕರು ಪತ್ರಿಕಾಗೋಷ್ಟಿಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ವಿದ್ಯುಕ್ತವಾಗಿ ಘೋಷಣೆ ಮಾಡಲಿದ್ದಾರೆ.
ನಾಳೆ ನವದೆಹಲಿಯಲ್ಲಿರುವ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬಳಗ್ಗೆ 11:30ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ವಿಶೇಷ ಎಂದರೆ, ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಮೊದಲ ಬಾರಿಗೆ ಅಭೂತಪೂರ್ವ ಗೆಲುವು ಸಾಧಿಸಿದ್ದ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರವಾಲ್ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಇದೇ ಸ್ಥಳದಲ್ಲಿ,
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿ ಬಿಜೆಪಿ ಆಡಳಿತ ರಾಜ್ಯಗಳ ಸಿಎಂಗಳು, ಪ್ರಮುಖ ನಾಯಕರು, ಸಾಧು ಸಂತರು. ಸಿನಿಮಾ ತಾರೆಗಳು ಭಾಗಿಯಾಗುವ ಸಾಧ್ಯತೆಯಿದೆ.
ಒಡಿಶಾದಲ್ಲಿ ಮುಖ್ಯಮಂತ್ರಿಯನ್ನು ಹೆಸರಿಸಲು ಬಿಜೆಪಿ 7 ದಿನಗಳನ್ನು ತೆಗೆದುಕೊಂಡಿತು. ಒಂಬತ್ತನೇ ದಿನದಂದು ಭಜನ್ ಲಾಲ್ ಶರ್ಮಾ ಆವರಿಗೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆ ನೀಡಲು ಅನುಮೋದನೆ ನೀಡಲಾಯಿತು. ಅದೇ ರೀತಿ, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಲು 8 ದಿನಗಳು ಬೇಕಾಯಿತು.
ಛತ್ತೀಸ್ಗಢದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿಗೆ 7 ದಿನಗಳು ಬೇಕಾಯಿತು ಆದರೆ ದೆಹಲಿಯಲ್ಲಿ ಈ ಎಲ್ಲಾ ದಾಖಲೆಗಳು ಮುರಿದುಹೋಗಿವೆ ಮತ್ತು 11 ನೇ ದಿನದಂದು ಮುಖ್ಯಮಂತ್ರಿಯ ಹೆಸರು ತಿಳಿಯಲಿದೆ. ಫೆಬ್ರವರಿ 8 ರಂದು ದೆಹಲಿ ಜನರು ತಮ್ಮ ಜನಾದೇಶವನ್ನು ನೀಡಿದ್ದಾರೆ. ದೆಹಲಿಯ ಜನರು ಪ್ರಧಾನಿ ಮೋದಿ ನೀಡಿದ ಭರವಸೆಯನ್ನು ನಂಬಿದ್ದಾರೆ ಮತ್ತು ಬಿಜೆಪಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಬಿಜೆಪಿ ಪಾಳಯದಿಂದ 5 ಹೆಸರುಗಳು ಹೊರಬರುತ್ತಿವೆ. ಅದರಲ್ಲಿ ಪ್ರವೇಶ್ ವರ್ಮಾ, ರೇಖಾ ಗುಪ್ತಾ-ವಿಜೇಂದ್ರ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಆಶಿಶ್ ಸೂದ್ ಸೇರಿದ್ದಾರೆ.
