ಉದಯವಾಹಿನಿ, ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಯ ಸವಕನಹಳ್ಳಿಪಾಳ್ಯ ಗ್ರಾಮದಲ್ಲಿ ಮಂಗಳವಾರ ಕಬ್ಬಿನ ಗದ್ದೆಗೆ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಯನ್ನು ತುಳಿದು, ತಿಂದು ನಾಶಪಡಿಸಿವೆ.
ಗ್ರಾಮದ ಚಿಕ್ಕವೀರಯ್ಯ ಎಂಬವರ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಯಲ್ಲಿ ಮಂಗಳವಾರ ಬೆಳಗಿನ ಜಾವ ಬೀಡುಬಿಟ್ಟ 5 ಕಾಡಾನೆಗಳು ಇಡೀ ಕಬ್ಬಿನ ಫಸಲನ್ನೆ ತಿಂದು ರೈತನಿಗೆ ನಮ್ಮ ಉಂಟುಮಾಡಿವೆ.
ಆಕ್ರೋಶ: ಕಾಡಾನೆಗಳ ಹಿಂಡು ಜಮೀನಿಗೆ ಲಗ್ಗೆಯಿಟ್ಟು ಕಬ್ಬು ತಿಂದು ತುಳಿದು ನಾಶ ಪಡಿಸುತ್ತಿರುವ ಮಾಹಿತಿಯನ್ನು ರೈತರು ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ ಅಧಿಕಾರಿಗಳು ತಡವಾಗಿ ಬಂದಿದ್ದರು.
ಕಾಡಾನೆಗಳನ್ನು ಜಮೀನಿನಿಂದ ಒಡಿಸುವಂತೆ ಮನವಿ ಮಾಡಿದ್ದರೂ, ಆನೆಗಳು ಹೊರ ಬಂದರೆ ಜನರ ಮೇಲೆ ದಾಳಿ ಮಾಡಬಹುದು. ಇತರೆ ಜಮೀನಿನ ಫಸಲೂ ಕೂಡ ನಾಶವಾಗುತ್ತದೆ. ಆನೆಗಳು ಕಬ್ಬಿನ ಗದ್ದೆಯಲ್ಲಿ ಇರಲಿ, ಸಂಜೆ ಅರಣ್ಯಕ್ಕೆ ಅಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆಕ್ರೋಶಗೊಂಡ ರೈತರು ಫಸಲಿನ ಮೇಲೆ ಕಾಡಾನೆ ದಾಳಿ ನಡೆಸಲು ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದರು.
ಪರಿಹಾರಕ್ಕೆ ಒತ್ತಾಯ: ಕಾಡಾನೆಗಳಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅರಣ್ಯ ಇಲಾಖೆಯು ಸಂಪೂರ್ಣ ನಮ್ಮ ಪರಿಹಾರ ಭರಿಸಬೇಕು ಎಂದು ಸವಕನಹಳ್ಳಿ ಪಾಳ್ಯದ ಮುದ್ದುರಾಜು ಒತ್ತಾಯಿಸಿದ್ದಾರೆ.
ಹೊತ್ತಿ ಉರಿದ ಬೆಳೆ: ಕಾಡಾನೆಗಳನ್ನು ಕಬ್ಬಿನ ಗದ್ದೆಯಿಂದ ಓಡಿಸುವ ಸಲುವಾಗಿ ಜಮೀನಿನಲ್ಲಿ ಪಟಾಕಿ ಸಿಡಿಸಲಾಯಿತು. ಇದರ ಬೆಂಕಿ ಜಮೀನು ಆವರಿಸಿ ಒಣಗಿದ್ದ ಕಬ್ಬಿನ ತರಗಿದ ಮೇಲೆ ಬಿದ್ದಿದೆ. ಇದರಿಂದ ಸಂಪೂರ್ಣ ಬೆಳೆ ಹೊತ್ತಿ ಉರಿದು ಬೆಂಕಿಗಾಹುತಿಯಾಯಿತು.
