ಉದಯವಾಹಿನಿ, ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕ್ರೀಡೆಗೆ ಜನರಲ್ಲಿ ಆಸಕ್ತಿ ಇದ್ದರೂ, ಕ್ರೀಡಾಂಗಣ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವು ಕಾಮಗಾರಿ ಅರ್ಧಕ್ಕೆ ನಿಂತಿದ್ದರೆ, ಹಲವು ಕ್ರೀಡಾಂಗಣಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ಇನ್ನೂ ಕೆಲವೆಡೆ ನಿರ್ಮಾಣಕ್ಕೆ ಕಾದಿವೆ.
ಜಿಲ್ಲಾ ಕೇಂದ್ರದಲ್ಲಿ ಮೂರು ಹೊರಾಂಗಣ ಕ್ರೀಡಾಂಗಣ, ಒಂದು ಒಳಾಂಗಣ ಕ್ರೀಡಾಂಗಣ ಇದೆ.
ಶತಮಾನೋತ್ಸವ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2020-21ರಲ್ಲಿ ₹6.74 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯೂ ಆರಂಭವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.
ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು, ಜಲ್ಲಿ ಸುರಿದು ಬಿಟ್ಟು ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಉಳಿಕೆ ಕಾಮಗಾರಿಯನ್ನು ಈ ಮೊತ್ತದಲ್ಲಿ ಪೂರ್ಣಗೊಳಿಸಲು ಹೊಸದಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ. ಮತ್ತೆ ಕಾಮಗಾರಿ ಆರಂಭಿಸಲು ಹೆಚ್ಚುವರಿಯಾಗಿ ₹1.16 ಕೋಟಿ ಅನುದಾನದ ಅಗತ್ಯವಿದೆ. ಈ ಹಣ ಬಿಡುಗಡೆಯಾದರೆ ಕಾಮಗಾರಿ ಆರಂಭವಾಗಲಿದೆ.
ಕೆಪಿಟಿಸಿಎಲ್ನ ಸಿಎಸ್ಆರ್ ಅನುದಾನದಲ್ಲಿ ₹5 ಕೋಟಿ ಮೊತ್ತ ಕಾಮಗಾರಿ ಆರಂಭಿಸಲು ಯೋಜನೆ ರೂಪುಗೊಂಡಿದೆ. ಈ ಕಾಮಗಾರಿಯೂ ಪೂರ್ಣಗೊಂಡರೆ ಕ್ರೀಡಾಂಗಣ ಹೊಸ ರೂಪ ಪಡೆಯಲಿದೆ.
