ಉದಯವಾಹಿನಿ, ಲಂಡನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾಲದಾತರಿಗೆ ಪಾವತಿಸಬೇಕಿರುವ ₹1.10 ಲಕ್ಷ ಕೋಟಿ (1.28 ಬಿಲಿಯನ್ ಡಾಲರ್) ಸಾಲಕ್ಕೆ ಸಂಬಂಧಿಸಿ ಲಂಡನ್ ಹೈಕೋರ್ಟ್ ನೀಡಿರುವ ದಿವಾಳಿತನ ಕುರಿತ ಆದೇಶದ ವಿರುದ್ಧ ಭಾರತೀಯ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಬುಧವಾರ ವಜಾಗೊಂಡಿದೆ.
ಸದ್ಯ ಬ್ರಿಟನ್ನಲ್ಲಿ ನೆಲಸಿರುವ ಮಲ್ಯ, ತಮ್ಮ ಕಿಂಗ್ಫಿಶರ್ ಏರ್ಲೈನ್ಸ್ 2012ರಲ್ಲಿ ದಿವಾಳಿಯಾದ ನಂತರ ಸಾಲದಾತರು ಮತ್ತು ಭಾರತೀಯ ಅಧಿಕಾರಿಗಳ ವಿರುದ್ಧ ಸುದೀರ್ಘ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ. ಕಿಂಗ್ ಫಿಶರ್ ಏರ್ಲೈನ್ಸ್ ಗೆ ಸಾಲ ನೀಡಿದ ಬ್ಯಾಂಕ್ಗಳ ಗುಂಪಿಗೆ ಮಲ್ಯ ಅವರು ₹1.10 ಲಕ್ಷ ಕೋಟಿ ಪಾವತಿಸುವಂತೆ 2017ರಲ್ಲಿ ಕೋರ್ಟ್ ತೀರ್ಪು ನೀಡಿತ್ತು. ಇದು, 2021ರಲ್ಲಿ ಮಲ್ಯ ವಿರುದ್ಧ ದಿವಾಳಿತನದ ಆದೇಶ ಹೊರಡಿಸಲು ಕಾರಣವಾಗಿತ್ತು.
ದಿವಾಳಿತನದ ಆದೇಶದ ವಿರುದ್ಧ ಮಲ್ಯ ಅವರು ಮೇಲ್ಮನವಿ –ಸಲ್ಲಿಸಿದಾಗ, →ಬ್ಯಾಂಕುಗಳು ಈಗಾಗಲೇ ಸ್ವತ್ತುಗಳ ಮೂಲಕ ಸಾಲ ಮರುಪಾವತಿಸಿಕೊಂಡಿವೆ ಎಂದು ಅವರ ವಕೀಲರು ವಾದಿಸಿದರು. ಆದರೆ, ಅವರ ವಾದವನ್ನು ಮಂಗಳವಾರ ತಿರಸ್ಕರಿಸಿದ ನ್ಯಾಯಮೂರ್ತಿ ಆಂಥೋನಿ ಮಾನ್, ‘ದಿವಾಳಿತನ ಕುರಿತ ಆದೇಶವನ್ನು ಬದಲಿಸಲಾಗದು’ ಎಂದು ಲಿಖಿತ ತೀರ್ಪು ನೀಡಿದ್ದಾರೆ. ಅಲ್ಲದೆ, ಮಲ್ಯ ಹಸ್ತಾಂತರದ ಆದೇಶ ಜಾರಿಯಾಗಿಲ್ಲ ಎಂದು ಹೇಳಿದ್ದಾರೆ.
