ಉದಯವಾಹಿನಿ, ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ಯುಗಾದಿಯ ನಂತರ ಮಳೆ ಬಿದ್ದಮೇಲೆ ಶಾಸ್ತ್ರೋಕ್ತವಾಗಿ ‘ಹೊನ್ನೇಗಿಲು’ ಪೂಜೆ ನಡೆಸಿದ ನಂತರವೇ ಈ ವರ್ಷದ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆಸಿಕೊಂಡು ಬರಲಾಗಿದ್ದು, ಈ ಸಂಬಂಧ ಇಂದು ಎತ್ತುಗಳನ್ನು ಕಟ್ಟದ ನೇಗಿಲಿಗೆ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಲಾಯಿತು.
ಹೊನ್ನೇಗಿಲು ಎಂದು ಕರೆಯಲ್ಪಡುವ ಈ ಸಂಪ್ರದಾಯ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಯುಗಾದಿಯಂದು ಪಂಚಾಂಗ ಪಠಣ ನಡೆಸಿದ ಸಂದರ್ಭದಲ್ಲಿ ಈ ಸಾಲಿನಲ್ಲಿ ಹೊನ್ನೇಗಿಲು ಕಟ್ಟುವ ನಾಮಬಲದ ವ್ಯಕ್ತಿಯ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಹೆಸರಿನ ಮೊದಲ ಅಕ್ಷರ ‘ಜ’ ಇಂದ ಬಂದಿದ್ದು, ಅದರಂತೆ ಗ್ರಾಮದ ಮುಖಂಡ ಜಯರಾಮೇಗೌಡ ಅವರನ್ನು ಈ ವರ್ಷದ ಹೊನ್ನೇಗಿಲು ಕಟ್ಟಲು ಆಯ್ಕೆ ಮಾಡಲಾಗಿದೆ.
ಗ್ರಾಮದ ಪುರೋಹಿತರಾದ ಸೋಮಶಂಕರ ದೀಕ್ಷಿತ್ರವರ ಸೂಚನೆಯಂತೆ ಜೋಡೆತ್ತು ಕಟ್ಟಿದ ಹೊನ್ನೇಗಿಲಿಗೆ ಗ್ರಾಮದ ಪಟಾಲಮ್ಮ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿದರು.
ಜೋಡೆತ್ತುಗಳು ಮತ್ತು ನೇಗಿಲಿಗೆ ಪೂಜೆ ಸಲ್ಲಿಸಿ, ಈ ವರ್ಷದಲ್ಲಿ ಉತ್ತಮ ಮಳೆ,ಬೆಳೆಯಾಗಲಿ ಎಂದು ಪ್ರಾರ್ಥಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ದೇವರ ಅನುಗ್ರಹ ಪಡೆಯುವ ಈ ಪ್ರಯತ್ನ ಮುನ್ನಡೆಸಿಕೊಂಡು ಹೋಗುತ್ತಿರುವುದಾಗಿ ಮುಖಂಡರಾದ ಜಯರಾಮೇಗೌಡ ತಿಳಸಿದರು.
ಹೊನ್ನೇಗಿಲು ಪೂಜೆ ನಂತರ ಒಂದು ಸುತ್ತು ಉಳುಮೆ ಮಾಡುವ ಮೂಲಕ ಈ ಸಾಲಿನ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದ್ದು, ಯುಗಾದಿಯ ಹೊಸ ವರ್ಷದ ನಂತರ ಮೊದಲ ಮಳೆ ಬರುತ್ತಿದ್ದಂತೆ ಹೊನ್ನೇಗಿಲು ಪೂಜೆ ನಡೆಸಿದ ನಂತರವೇ ಕೃಷಿ ಕಾರ್ಯಕ್ಕೆ ಚಾಲನೆ ಸಿಗುತ್ತದೆ, ಅದಕ್ಕೂ ಮೊದಲು ಯಾರೂ ಉಳುಮೆ ಕಾರ್ಯ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
