ಉದಯವಾಹಿನಿ, ಮಸ್ಕಿ: ಅಮೃತ 2.0 ಯೋಜನೆ ಅಡಿಯಲ್ಲಿ ಪಟ್ಟಣದ ಬಸವೇಶ್ವರ ನಗರದಲ್ಲಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಯಲ್ಲಿ ಅಗೆದ ಗುಂಡಿಗಳನ್ನು ಭಾನುವಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ‘ಅಮೃತ ಯೋಜನೆ ಕಾಮಗಾರಿ ಸ್ಥಗಿತ-ಜನರ ಪರದಾಟ’ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ಯ ಜು.5ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹42 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಅಮೃತ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಲವು ದಿನಗಳಿಂದ ಸ್ಥಗಿತಗೊಂಡಿದೆ.
ಬಸವೇಶ್ವರ ನಗರದಿಂದ ಕಾಮಗಾರಿ ಚಾಲನೆ ಮಾಡಿದ್ದ ಯೋಜನೆಯ ಗುತ್ತಿಗೆದಾರರು ರಸ್ತೆಯ ನಡುವೆ ಅವೈಜ್ಞಾನಿಕವಾಗಿ ಪೈಪ್‌ಲೈನ್ ಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ನೀರು ಸರಬರಾಜು ಮಂಡಳಿ ಅಧಿಕಾರಿಗಳು ರಸ್ತೆಯ ನಡುವೆ ಹಾಕಿದ್ದ ಪೈಪ್ ತೆಗೆದು ರಸ್ತೆಯ ದಂಡೆಯಲ್ಲಿ ಹಾಕುವಂತೆ ಸೂಚಿಸಿದ್ದರು. ಅದರಂತೆ ಪೈಪ್ ತೆಗೆದ ಗುತ್ತಿಗೆದಾರರು ಸರಿಯಾಗಿ ರಸ್ತೆಗುಂಡಿ ಮುಚ್ಚದ ಕಾರಣ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಈ ಗುಂಡಿಯಲ್ಲಿ ವಾಹನಗಳು ಸಿಕ್ಕಿಕೊಂಡು ತೊಂದರೆ ಅನುಭವಿಸುವಂತಾಗಿತ್ತು.

Leave a Reply

Your email address will not be published. Required fields are marked *

error: Content is protected !!