ಉದಯವಾಹಿನಿ,ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುನೀರಿಕ್ಷಿತ ವಂದೇ ಭಾರತ್ ರೈಲು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಭಾರತೀಯ ರೈಲ್ವೆ ಇಲಾಖೆಯಿಂದ ಇದುವರೆಗೂ ನೈಋತ್ಯ ರೈಲ್ವೆ ವಲಯಕ್ಕೆ ಮಾತ್ರ ಯಾವುದೇ ರೀತಿಯ ಅಧಿಕೃತ ಮಾಹಿತಿ ಕೂಡ ಲಭ್ಯವಾಗಿಲ್ಲ. ಜೂ.26 ರಂದು ಚಾಲನೆ ನೀಡಲಿರುವ ವಂದೇ ಭಾರತ ರೈಲಿನ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ನೈರುತ್ಯ ರೈಲ್ವೆ ವಿಭಾಗದದ ಕೈ ಸೇರಿಲ್ಲ. ಹೌದು, ಪ್ರತಿಷ್ಠಿತ ವಂದೇ ಭಾರತ್ ರೈಲು ಗುರುವಾರ ಬೆಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದೆ. ಬೆಂಗಳೂರು- ಧಾರವಾಡ ಮಾರ್ಗದಲ್ಲಿ ಸಂಚರಿಸಲು ಜೂ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದು, ಅದಕ್ಕೂ ಮುನ್ನ ಸೋಮವಾರದಿಂದ ಇದರ ಪ್ರಾಯೋಗಿಕ ಚಾಲನೆ ನಡೆಯಲಿದೆ. ಎಂಟು ಬೋಗಿಗಳುಳ್ಳ ಮಿನಿ ವಂದೇ ಭಾರತ್ ಇದಾಗಿದೆ.
ಚೆನ್ನೈನ ಪೆರಂಬೂರಿನಿಂದ ಹೊರಟು ಬೆಂಗಳೂರು ತಲುಪಿದ್ದು, ಇಲ್ಲಿನ ಕೆಎಸ್ಆರ್ ನಿಲ್ದಾಣದ 7ನೇ ಪ್ಲಾಟ್ಫಾರ್ಮ್ನಲ್ಲಿ ನಿಲುಗಡೆಯಾಗಿದೆ ಎಂಬುವಂತ ಮಾಹಿತಿ ಲಭ್ಯವಾಗಿದೆ. ಆದರೆ ಧಾರವಾಡ-ಬೆಂಗಳೂರು ಸಂಚರಿಸುವ ವಂದೇ ಭಾರತ್ ರೈಲಿನ ಬಗ್ಗೆ ನೈಋತ್ಯ ರೈಲ್ವೆಗೆ ಮಾತ್ರ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನೂ ಈ ವಂದೇ ಭಾರತ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹುಬ್ಬಳ್ಳಿಯ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮೂಲಕ ಧಾರವಾಡ ರೈಲು ನಿಲ್ದಾಣದವರೆಗೆ ಅಂದರೆ 487.47 ಕಿ.ಮೀ. ಸಂಚರಿಸಲಿದೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಇದು ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
