ಉದಯವಾಹಿನಿ, ಮಾಗಡಿ: ಬಮುಲ್ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ. ಈ ಕೆಲಸವನ್ನು ನಾನು ಮಾಡುತ್ತೇನೆ. ಇದಕ್ಕೆ ಎಲ್ಲಾ ನಾಯಕರ ಬೆಂಬಲ ಬೇಕು. ಎಲ್ಲರ ಜೊತೆಯೂ ನಾನು ಚರ್ಚೆ ನಡೆಸುತ್ತೇನೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.ಮಾಗಡಿಯಲ್ಲಿ ಮಾತನಾಡಿದ ಅವರು, ನನಗೆ ಡೈರಿಯ ಸಂಬಳ, ಡೈರಿಯ ಅನುಕೂಲಗಳು ಬೇಡ. ನಾನು ಇರುವ ತನಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನನ್ನ ಮನವಿ ಎಂದರೆ ನಂದಿನಿ ಉಳಿಸಿ, ಬೆಳೆಸಿ,ಉತ್ಪನ್ನಗಳನ್ನು ಬಳಸಿ” ಎಂದರು.
ನಂದಿನಿ ಉತ್ಪನ್ನಗಳ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಪನ್ನೀರಿನ ಬೇಡಿಕೆಗೆ ಶೇ 5 ರಷ್ಟು ಮಾತ್ರ ನಾವು ಪೂರೈಕೆ ಮಾಡುತ್ತಿದ್ದೇವೆ. ಇದನ್ನು ಹೆಚ್ಚು ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಜನರೇ ನಂದಿನಿ ಉತ್ಪನ್ನಗಳನ್ನು ಹೆಚ್ಚು ಬಳಸುವ ಮೂಲಕ ಮಾರುಕಟ್ಟೆ ಹೆಚ್ಚು ಮಾಡಿಕೊಡಬೇಕು” ಎಂದು ಹೇಳಿದರು.ಹೊಸಕೋಟೆಯಲ್ಲಿ 22 ಎಕರೆ ಜಮೀನು, ದೊಡ್ಡಬಳ್ಳಾಪುರದಲ್ಲಿಯೂ 8 ಎಕರೆ ಜಮೀನಿದೆ ಅಲ್ಲಿಯೂ ಹಾಲು ಸಂಸ್ಕರಣ ಕೇಂದ್ರ ತೆರೆಯಬೇಕು ಎಂಬುದು ಅಲ್ಲಿನವರ ಬೇಡಿಕೆ. ಮಾಗಡಿ ತಾಲ್ಲೂಕಿನ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ಕಾವೇರಿ, ಹೇಮಾವತಿ, ಎತ್ತಿನಹೊಳೆಯಿಂದಲೂ ನೀರು ಬರುವ ಸಂಭವವಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು” ಎಂದರು.
ನಾವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಿದಾಗ ಮಾತ್ರ ಈ ಅಭಿನಂದನೆಗೆ ನಾವು ಅರ್ಹ ಎಂದು ಸಾಬೀತಾಗುತ್ತದೆ. ನನಗೆ ಹಾಲು ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಅನುಭವವಿಲ್ಲ. ಈ ಕ್ಷೇತ್ರದ ಪ್ರಕ್ರಿಯೆ, ಅದರ ಆಡಳಿತ ಬಗ್ಗೆ ನಾನು ಈಗಷ್ಟೇ ಪ್ರಾಮಾಣಿಕವಾಗಿ ಕಲಿಯುತ್ತಿದ್ದೇನೆ. ನಾನು ಕೆಟ್ಟವನಾಗಬೇಕಾ, ಒಳ್ಳೆಯವನಾಗಬೇಕಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕೆಟ್ಟವನಾಗದೆ ನನಗೆ ಬೇರೆ ವಿಧಿ ಇಲ್ಲ” ಎಂದರು.
