ಉದಯವಾಹಿನಿ, ಹೈದರಾಬಾದ್​​ : ಮುತ್ತಿನ ನಗರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಮುಂಜಾನೆ ಪಾರ್ಕ್​ಗೆ ಕುಟುಂಬಸಮೇತ ವಾಕಿಂಗ್​ ಹೋಗಿದ್ದ ಭಾರತೀಯ ಕಮ್ಯುನಿಷ್ಟ ಪಕ್ಷದ ರಾಜ್ಯ ಘಟಕದ ಮುಖಂಡನನ್ನು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡುವ ಮೂಲಕ ಹತ್ಯೆಗೈದಿದ್ದಾರೆ. ಹೈದರಾಬಾದ್​ನ ಮಲಕ್​ಪೇಟ್​ ಏರಿಯಾದಲ್ಲಿರುವ ಶಾಲಿವಾಹನ ನಗರ ಪಾರ್ಕ್​ ಬಳಿ 43 ವರ್ಷ ವಯಸ್ಸಿನ ಚಂದು ನಾಯ್ಕ್​ ಎಂಬುವರ ಭೀಕರ ಹತ್ಯೆಯಾಗಿದೆ. ಕಾರಿನಲ್ಲಿ ದಿಢೀರ್​ ಬಂದ ದುಷ್ಕರ್ಮಿಗಳು ಚಂದು ನಾಯ್ಕ್​ ಮೇಲೆ ಗುಂಡಿನಮಳೆಗರೆದರು. ಆರು ಸುತ್ತು ಗುಂಡು ಹಾರಿಸಿದ ಪರಿಣಾಮ ನಾಯ್ಕ್​ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ದುಷ್ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪತ್ನಿ ಮಗಳೆದುರೇ ಪ್ರಾಣಬಿಟ್ಟ ನಾಯ್ಕ್​: ಪತ್ನಿ ಮತ್ತು ಮಗಳೊಂದಿಗೆ ಬೆಳಗ್ಗೆ ವಾಕಿಂಗ್​ ಹೋಗಿದ್ದ ನಾಯ್ಕ್​ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಅವರೆದುರೇ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನಾಗರಕರ್ನೂಲ್ ಜಿಲ್ಲೆಯ ಬಾಲಮೂರು ತಾಲೂಕಿನ ನರಸಾಯಿಪಲ್ಲಿಯವರಾದ ಚಂದು ನಾಯ್ಕ್,​ ಹೈದರಾನಾದ್​ನಲ್ಲಿ ಕುಟುಂಬಸಮೇತ ವಾಸಿಸುತ್ತಿದ್ದರು. ಈ ಕೊಲೆ ಭೂಮಿಯ ವಿವಾದದಿಂದ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ಮಾಹಿತಿ ಕಲೆ ಹಾಕಿದರು. ಈ ಕೊಲೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!