ಉದಯವಾಹಿನಿ, ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಈ ಜೋಡಿ ಉತ್ತರಾಖಂಡ ಋಷಿಕೇಶ್, ಮನಾಲಿಗೆ ಹೋಗಿ ಹನಿಮೂನ್ ಮುಗಿಸಿ ಬಂದಿದ್ದಾರೆ.
ಹನಿಮೂನ್ ಫೋಟೋವನ್ನು ವೈಷ್ಣವಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭ ವೈಷ್ಣವಿ ಅವರ ಕೊರಳಿನಲ್ಲಿ ತಾಳಿ ಇರಲಿಲ್ಲ. ಇದನ್ನು ಗಮನಿಸಿದ ಫ್ಯಾನ್ಸ್, ಮದುವೆ ಬಳಿಕ ನೀವು ಯಾಕೆ ತಾಳಿ ಹಾಕ್ಲಿಲ್ಲ. ತಾಳಿ ಹಾಕದೇ ನಮ್ಮ ಸಂಪ್ರದಾಯಕ್ಕೆ ಗೌರವ ಕೊಡಲ್ವಾ? ಮದುವೆ ಯಾಕ್ ಬೇಕಿತ್ತು, ತಾಳಿ ಹಾಕದೇ ಇದ್ದಮೇಲೆ ಎಂದು ಕಾಮೆಂಟ್ ಕೆಲವರು ಕಾಮೆಂಟ್ ಮಾಡಿದ್ದರು. ಇದೀಗ ಈ ಎಲ್ಲ ಪ್ರಶ್ನೆಗೆ ವೈಶು ಉತ್ತರ ಕೊಟ್ಟಿದ್ದಾರೆ.
‘‘ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ. ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ’’ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.
