ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳ ಪ್ರಕರಣಗಳಲ್ಲಿ ಎಸ್ಐಟಿ ತಂಡಕ್ಕೆ ತನಿಖೆ ಆರಂಭಿಸಲು ಸೂಚನೆ ಕೊಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೂಡಲೇ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡಲು ಎಸ್ಐಟಿ ತಂಡಕ್ಕೆ ತಿಳಿಸಲಾಗಿದೆ. ಇಂದು ಅಥವಾ ನಾಳೆ ಎಸ್ಐಟಿ ತಂಡ ಧರ್ಮಸ್ಥಳಕ್ಕೆ ಹೋಗಲಿದೆ. ಇನ್ನು ಧರ್ಮಸ್ಥಳದ ಪೊಲೀಸರಿಗೂ ಪ್ರಕರಣದ ಮಾಹಿತಿ, ದಾಖಲೆ ಕೊಡಲು ಸೂಚನೆ ಕೊಡಲಾಗಿದೆ ಎಂದರು. ಇನ್ನು ಎಸ್ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ. ಯಾರಾದ್ರೂ ಹೊರಗೆ ಉಳಿಯುವುದಾದರೆ ನಮಗೆ ತಿಳಿಸಲಿ. ಆ ಬಗ್ಗೆ ಕ್ರಮ ಆಗಲಿದೆ. ಬದಲಾವಣೆ ಮಾಡಲಾಗುತ್ತದೆ. ಆದರೆ ಈವರೆಗೆ ಯಾರೂ ಈ ವಿಚಾರದಲ್ಲಿ ಮಾಹಿತಿ ಕೊಟ್ಟಿಲ್ಲ. ಇಲಾಖೆಗೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಐಟಿಗೆ ಕೆಲ ಬಿಜೆಪಿರ ಆಕ್ಷೇಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಎಸ್ಐಟಿಗೆ ಯಾಕೆ ಆಕ್ಷೇಪ ಮಾಡ್ತಿದ್ದಾರೆ? ಈಗಿಂದಲೇ ಯಾಕೆ ಅವರು ಏನೇನೋ ಫ್ರೇಮ್ ಮಾಡ್ತಿದ್ದಾರೆ. ಎಸ್ಐಟಿ ರಚನೆಯಲ್ಲಿ ರಾಜಕೀಯ ಉದ್ದೇಶ ಇದೆ ಅಂತ ಈಗಲೇ ಅವರು ಹೇಗೆ ಹೇಳ್ತಾರೆ. ಅವರ ಮನಸಲ್ಲಿ ಏನೋ ಇದೆ ಅಂತ ಆಯ್ತಲ್ಲ. ಸರ್ಕಾರ ಸತ್ಯ ಹೊರಗೆಳೆಯಲು ಎಸ್ಐಟಿ ರಚಿಸಿದೆ. ಈಗಲೇ ಬಿಜೆಪಿಯವರು ಅದೂ ಇದೂ ಹೇಳಿದ್ರೆ ಹೇಗೆ? ಸತ್ಯ ಹೊರಗೆ ಬರಲಿ ಅಂತ ಎಸ್ಐಟಿ ಮಾಡಿದ್ದೇವೆ. ಅಷ್ಟಕ್ಕೇ ಎಲ್ಲರೂ ಸೀಮಿತ ಆದ್ರೆ ಸಾಕು ಎಂದು ಹೇಳಿದರು.
