ಉದಯವಾಹಿನಿ,ಬೆಂಗಳೂರು: ಕರ್ನಾಟಕದ ಕಾಂಗ್ರೇಸ್ ನೇತೃತ್ವದ ಸರ್ಕಾರವು 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲು ಬುಧವಾರ ಆದೇಶ ಹೊರಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಶುಭ ಕಲ್ಯಾಣ್ ಸುತ್ತೋಲೆ ಬಿಡುಗಡೆ ಮಾಡಿದ್ದು, ರಾಜ್ಯಾದ್ಯಂತ ಇರುವ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ಬೇಯಿಸಿದ ಮೊಟ್ಟೆಯನ್ನು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಪೂರಕವಾಗಿ ನೀಡುವಂತೆ ಸೂಚಿಸಿದ್ದಾರೆ. ಮೊಟ್ಟೆ ತಿನ್ನದಿರುವವರಿಗೆ ಬಾಳೆಹಣ್ಣು ಅಥವಾ ಚಿಕ್ಕಿ (ಕಡಲೆಕಾಯಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ) ನೀಡುವಂತೆ ತಿಳಿಸಿದ್ದಾರೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸಲು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕಗಳನ್ನು ನೀಡಲಾಗುವುದು. ಜುಲೈ 15ರವಗೆ ಮೊದಲ ಹಂತದಲ್ಲಿ ವಾರಕ್ಕೊಮ್ಮೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ಸರ್ಕಾರ ಮುಂದಾಗಿದೆ.
