ಉದಯವಾಹಿನಿ, ಕೋಲ್ಕತ್ತಾ: ಸ್ಯಾನ್ಫ್ರ್ಯಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ಜಿರಳೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಏರ್ಇಂಡಿಯಾ ವಿಮಾನಯಾನ ಸಂಸ್ಥೆ ಪ್ರತಿಕಾ ಹೇಳಿಕೆ ಬಿಡುಗಡೆಗೊಳಿಸಿ, ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.
ಸೋಮವಾರ ಸ್ಯಾನ್ಫ್ರ್ಯಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ಇಂಡಿಯಾ AI180 ವಿಮಾನ ಇಂಧನ ಭರ್ತಿಗಾಗಿ ಕೋಲ್ಕತ್ತಾದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ ಇಬ್ಬರು ಪ್ರಯಾಣಿಕರು ಕುಳಿತಿದ್ದ ಆಸನದ ಕೆಳಗೆ ಜಿರಳೆ ಕಾಣಿಸಿಕೊಂಡಿದೆ. ಈ ಕುರಿತು ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬಳಿಕ ಪ್ರಯಾಣಿಕರನ್ನು ಅದೇ ಕ್ಯಾಬಿನ್ನ ಇನ್ನೊಂದು ಆಸನಕ್ಕೆ ಬದಲಾಯಿಸಿದರು.
ಈ ಕುರಿತು ಏರ್ಇಂಡಿಯಾ ಸಂಸ್ಥೆ ಪ್ರತಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು, ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ. ಪ್ರಯಾಣಿಕರಿಗೆ ಜಿರಳೆಯಿಂದ ಸಮಸ್ಯೆಯಾದಾಗ ನೆಲವನ್ನು ಶುಚಿಗೊಳಿಸಲಾಯಿತು. ಅಲ್ಲಿಂದ ವಿಮಾನ ಸರಿಯಾದ ಸಮಯಕ್ಕೆ ಮುಂಬೈ ತಲುಪಿದೆ. ನಾವು ನಿರಂತರವಾಗಿ ವಿಮಾನವನ್ನು ಸ್ವಚ್ಛವಾಗಿಟ್ಟರೂ ಕೂಡ ಕೆಲವೊಮ್ಮೆ ಕೀಟಗಳು ವಿಮಾನವನ್ನು ಪ್ರವೇಶಿಸುತ್ತವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಏರ್ ಇಂಡಿಯಾ ತಿಳಿಸಿದೆ.
