ಉದಯವಾಹಿನಿ, ಬೆಂಗಳೂರು: ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸನ್ನು ಎನ್ಐಎಗೆ ವಹಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಎಮ್ಮೆ ಚರ್ಮದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅವರ ಮನಸ್ಥಿತಿ ಕೂಡ ಹಾಗೆ ಇದೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗಿ ಆಗುತ್ತಿತ್ತು. ಆದರೆ ಈಗ ಅದನ್ನ ಮೀರಿ ಬೀದರ್ನಿಂದ ಬೆಂಗಳೂರಿನವರೆಗೂ ವ್ಯಾಪಿಸಿದೆ. ಆ.3ರಂದು ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ನಾಯಕ್ ಎಂಬ ಯುವಕನ ಕೊಲೆ ಆಗಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿ ಆತ. ಈತನನ್ನ ಸಾದಿಕ್ ಹಾಗೂ ಐದಾರು ಜನ ಸೇರಿ ಮಸೀದಿಯ ಮುಂಭಾಗ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.
ಬಳ್ಳಾರಿ ಸಾಕಿದ ನಾಯಿ ಕೊಪ್ಪಳಕ್ಕೆ ಬಂದಿದೆ ಅಂತ ಶ್ರೀರಾಮುಲುಗೆ ಫರೀದ್ ಎಂಬಾತ ಹೇಳಿದ್ದಾನೆ. ಪೊಲೀಸ್ ಇಲಾಖೆ ಕತ್ತೆ ಕಾಯ್ತಿದೆಯಾ? ಬಿಜೆಪಿ ಕಾರ್ಯಕರ್ತರು ಅಂದರೆ ಅವರ ಮೇಲೆ ಕೇಸ್ ಹಾಕ್ತೀರಾ. ಇಂತಹ ವಿಷಯಗಳು ಪೊಲೀಸರಿಗೆ ಕಾಣೋದಿಲ್ಲವಾ? ಪೊಲೀಸ್ ಇಲಾಖೆ, ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.
