ಉದಯವಾಹಿನಿ, ಕಠ್ಮಂಡು: ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್, ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಅಲಿಯಾಸ್ ʻಸಲೀಂ ಪಿಸ್ತೂಲ್ʼನನ್ನು ನೇಪಾಳದಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಭದ್ರತಾ ಸಂಸ್ಥೆಗಳ ತಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಬಂಧಿಸಿದೆ.
ಐಎಸ್ಐ ಮತ್ತು ಡಿ ಕಂಪನಿಯೊಂದಿಗೆ ಸಂಬಂಧ: ಇನ್ನೂ ಪೊಲೀಸರ ಪ್ರಕಾರ, ಸಲೀಂ ಪಿಸ್ತೂಲ್ ಕಳೆದ ಹಲವಾರು ವರ್ಷಗಳಿಂದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹ್ಯಾಂಗ್, ಹಾಶಿಂ ಬಾಬಾ ಸೇರಿದಂತೆ ಅನೇಕ ದರೋಡೆಕೋರರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಿದ್ದ. ಅಲ್ಲದೇ ಈತ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಕಂಪನಿಯೊಂದಿಗೂ ಸಂಪರ್ಕ ಹೊಂದಿದ್ದ ಅನ್ನೋ ರಹಸ್ಯವನ್ನ ತನಿಖಾಧಿಕಾರಿಗಳು ಸಾಕ್ಷಿ ಸಮೇತ ಬಯಲಿಗೆಳೆದಿವೆ. ಸಿಧು ಮೂಸೆವಾಲಾ, ಬಾಬಾ ಸಿದ್ದಿಕಿ ಕೊಲೆ ಪ್ರಕರಣ ಸೇರಿದಂತೆ ಪ್ರಮುಖ ಅಪರಾಧಗಳಲ್ಲಿ ಸಲೀಂ ಪಿಸ್ತೂಲ್ನ ಹೆಸರು ಕಾಣಿಸಿಕೊಂಡಿದೆ. ಅಲ್ಲದೇ ಸಿಧು ಮೂಸೆವಾಲಾರ ಹಂತಕರ ಪೈಕಿ ಓಬ್ಬನಿಗೆ ಈತನೇ ಮಾರ್ಗದರ್ಶಕನಾಗಿದ್ದ ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿ.
1972ರಲ್ಲಿ ದೆಹಲಿಯ ಸೀಲಾಂಪುರದಲ್ಲಿ ಜನಿಸಿದ ಶೇಖ್ ಸಲೀಂ ಆರ್ಥಿಕ ಸಮಸ್ಯೆಯಿಂದಾಗಿ 8ನೇ ತರಗತಿಗೇ ಓದನ್ನು ಬಿಟ್ಟು ಟ್ಯಾಕ್ಸಿ ಚಾಲಕನಾದ. ನಂತರ ಸ್ನೇಹಿತರ ಸಹವಾಸದಿಂದ ವಾಹನ ಕಳ್ಳತನಕ್ಕಿಳಿಯುವ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ. 2000 ಇಸವಿಯಲ್ಲಿ ಮೊದಲ ಬಾರಿಗೆ ವಾಹನ ಕಳ್ಳತನ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ. ಆ ನಂತರ 2018ರಲ್ಲಿ ದೆಹಲಿಯಲ್ಲಿ ಅರೆಸ್ಟ್ ಆದ ಬಳಿಕ ಸಲೀಂ ವಿದೇಶಕ್ಕೆ ಪರಾರಿಯಾಗಿದ್ದ ಅಲ್ಲಿಂದ ಶಸ್ತ್ರಾಸ್ತ್ರ ಪೂರೈಕೆ ಜಾಲ ನಿರ್ವಹಿಸಲು ಪ್ರಾರಂಭಿಸಿದ್ದ. ಕೊನೆಗೆ ನೇಪಾಳದಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
