ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಅಕ್ಕಿ ತಿಕ್ಕಾಟ ಮುಂದುವರಿದಿದೆ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರದಿಂದ ಅಕ್ಕಿ ಪಡೆಯಲು ಹರಸಾಹಸ ಪಡುತ್ತಿದೆ. ಸಿದ್ದರಾಮಯ್ಯ ಹೇಳಿಕೆ ಉಲ್ಲೇಖಿಸಿ ಶಾಸಕ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ, ಚುನಾವಣಾ ರಾಜಕೀಯಕ್ಕೆ ಅಕ್ಕಿ ಬಳಸಿಕೊಂಡವರು ನೀವೇ, ಅಕ್ಕಿ ಹೆಸರಿನಲ್ಲಿ ಓಟು ಪಡೆದವರೂ ನೀವೇ, ಅಕ್ಕಿ ಋಣ ತೀರಿಸಬೇಕಾದವರೂ ನೀವೇ, ಮೋದಿಜೀ ಅವರ ಸರ್ಕಾರ ಈ ಕ್ಷಣಕ್ಕೂ 5ಕೆಜಿ ಉಚಿತ ಅಕ್ಕಿ ನಿಮ್ಮ ಸರ್ಕಾರದ ಮೂಲಕವೇ ಜನರಿಗೆ ವಿತರಿಸುತ್ತಿದೆ, ಆದಾಗ್ಯೂ ಕೇಂದ್ರದ ಮೇಲೆ ದೂಷಣೆ ಮೂಡುತ್ತಿರುವವರೂ ನೀವೇ? ಮಾನ್ಯ ಮುಖ್ಯಮಂತ್ರಿಗಳೇ, ನಿಮಗಿದು ತರವೇ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. ಎಫ್.ಸಿ.ಐ. ಅಕ್ಕಿ ನೀಡುವ ವಿಚಾರದಲ್ಲಿ ಒಪ್ಪಿಗೆ ಪತ್ರವನ್ನು ನೀಡಿ ಮರುದಿನವೇ ಅಕ್ಕಿ ವಿತರಣೆಯನ್ನು ರಾಜ್ಯಗಳಿಗೆ ಸ್ಥಗಿತಗೊಳಿಸಿಗಿರುವ ವಿಚಾರವನ್ನು ಗಮನಕ್ಕೆ ತರಲಾಗಿದೆ. ಅಮಿತ್ ಶಾ ಸಂಬಂಧಪಟ್ಟ ಸಚಿವರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದಿದ್ದರು.
