ಉದಯವಾಹಿನಿ, ಚೆನ್ನೈ: ತಮಿಳು ಗೀತರಚನೆಕಾರ ಮತ್ತು ಕವಿ ವೈರಮುತ್ತು ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಶ್ರೀರಾಮನ ಕುರಿತು ಮಾಡಿದ ಭಾಷಣವು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆ ಹಿಂದೂಗಳ ಭಾವನೆಗೆ ನೋವುಂಟು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಮಾಯಣ ಮಹಾಕಾವ್ಯದ ತಮಿಳು ಆವೃತ್ತಿ ಬರೆದ ಮಧ್ಯಕಾಲೀನ ತಮಿಳು ಕವಿ ಕಂಬಾರ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ವೈರಮುತ್ತು, ಶ್ರೀರಾಮನು ತನ್ನ ಪತ್ನಿ ಸೀತಾದೇವಿಯಿಂದ ಬೇರ್ಪಟ್ಟ ನಂತರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಸೀತೆಯಿಂದ ಬೇರ್ಪಟ್ಟ ನಂತರ, ತಾನು ಏನು ಮಾಡುತ್ತಿದ್ದೇನೆಂದು ತಿಳಿಯದ ಮಟ್ಟಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84 ರ ಅಡಿಯಲ್ಲಿ, ಮಾನಸಿಕ ಅಸ್ವಸ್ಥತೆ ಇರುವ ವ್ಯಕ್ತಿಯು ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ ವೈರಮುತ್ತು ತಿಳಿಸಿದ್ದಾರೆ.ರಾಮನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ, ಕ್ಷಮಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಜರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಪವಿತ್ರ ಹಿಂದೂ ದೇವತೆಗಳನ್ನು ಅಪಮಾನಿಸುವ ಕೆಲಸವನ್ನು ವೈರಮುತ್ತು ಅವರು ಮಾಡುತ್ತಿದ್ದಾರೆ. ಈಗ ರಾಮನನ್ನು ಮಾನಸಿಕವಾಗಿ ಅಸ್ಥಿರ ಎಂದು ನಾಲಿಗೆ ಹರಿಬಿಟ್ಟಿದ್ದಾರೆಂದು ಬಿಜೆಪಿ ನಾಯಕ ಸಿ.ಆರ್.ಕೇಶವನ್ ಟೀಕಾಪ್ರಹಾರ ನಡೆಸಿದ್ದಾರೆ
