ಉದಯವಾಹಿನಿ, ವಾಷಿಂಗ್ಟನ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದಿಂದ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ನಾವು ಅರ್ಧ ಪ್ರಪಂಚವನ್ನೇ ನಾಶಪಡಿಸುತ್ತೇವೆ ಎಂದು ಪರಮಾಣು ಬೆದರಿಕೆ ಹಾಕಿದ್ದಾರೆ. ಪ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಿಂಧೂ ನದಿಗೆ ಅಡ್ಡಲಾಗಿರುವ ಭಾರತದ ಅಣೆಕಟ್ಟೆಯನ್ನ ಕ್ಷಿಪಣಿಗಳಿಂದ ನಾಶಪಡಿಸುತ್ತೇವೆಂದು ಭಾರತದ ವಿರುದ್ಧ ಪರಮಾಣು ಬೆದರಿಕೆ ಒಡ್ಡಿದ್ದಾರೆ. ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಇಸ್ಲಾಮಾಬಾದ್ ಅರ್ಧ ಜಗತ್ತನ್ನ ನಾಶಪಡಿಸುತ್ತದೆ.
ನಾವು ಒಂದು ಪರಮಾಣು ರಾಷ್ಟ್ರ, ನಾವು ಪತನವಾಗ್ತಿದ್ದೀವಿ ಎಂದರೇ ನಮ್ಮ ಜೊತೆ ಅರ್ಧ ಪ್ರಪಂಚವನ್ನ ಪತನಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ಭಾರತ ಅಣೆಕಟ್ಟು ನಿರ್ಮಿಸುವವರೆಗೂ ಕಾದು ಬಳಿಕ ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅಲ್ಹಮ್ದುಲಿಲ್ಲಾಹ್ ಎಂದು ಉಲ್ಲೇಖಿಸಿ ಅಸಿಮ್ ಅಟ್ಟಹಾಸ ಮೆರೆದಿದ್ದಾರೆ. ಭಾರತ ಫೆರಾರಿಯಂತಹ ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್, ಪಾಕಿಸ್ತಾನ ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್, ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂದು ಅಟ್ಟಹಾಸದ ಮಾತನ್ನಾಡಿದ್ದಾರೆ.
