ಉದಯವಾಹಿನಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲುಪಾಲಾದ ಬಗ್ಗೆ ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ವ್ಯಾಪಾರ ಜಗತ್ತಿನಲ್ಲಿ ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ. ಅವರ ಬಂಧನ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ನಟಿ ಹೇಳಿಕೆ ನೀಡಿದ್ದಾರೆ.
ಮಾತನಾಡಿದ ಉಮಾಶ್ರೀ, ಸುಪ್ರೀಂ ಕೋರ್ಟ್ನ ಬೆಳವಣಿಗೆಯನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕು. ನಮಗು ಕೂಡ ಅದು ಅನಿವಾರ್ಯ. ನಾನು ಅವತ್ತು ಕೂಡ ಹೇಳಿದ್ದೆ, ಇವತ್ತೂ ಹೇಳುತ್ತೇನೆ. ನಾವು ಕಲಾವಿದರು, ಸಮಾಜದ ಸ್ವತ್ತು. ನಮ್ಮನ್ನ ಗಮನಿಸುತ್ತಿರುತ್ತಾರೆ. ಹಾಗಾಗಿ, ನಮ್ಮ ಪ್ರತಿಯೊಂದು ಮಾತು, ಕೃತಿ ಚೌಕಟ್ಟಿನಲ್ಲಿ ಇರುವುದನ್ನ ನಿರೀಕ್ಷೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಟೀಕೆ-ಪ್ರಶಂಸೆಗಳು ಸಹಜವಾಗಿ ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅಭಿವ್ಯಕ್ತಿ ಪಡಿಸುವಲ್ಲಿ ಪರ-ವಿರುದ್ಧ ಮಾತನಾಡುವಾಗ, ಸಂಯಮ ಕಳೆದುಕೊಂಡಾಗ ಈ ರೀತಿ ಘಟನೆಗಳು ನಡೆಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ನನ್ನ ಅನುಭವದಲ್ಲಿ ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಎಲ್ಲರ ಅಭಿಮಾನಿಗಳನ್ನು ನೋಡಿದ್ದೇನೆ. ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ಬಹಳ ಎಂದರೆ ಕೂಗಾಡುತ್ತಿದ್ದರು, ಕಿರುಚಾಡುತ್ತಿದ್ದರು. ಆ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದರು, ಅಲ್ಲಿಗೆ ಮುಗಿಯುತ್ತಿತ್ತು. ಸೋಷಿಯಲ್ ಮೀಡಿಯಾ ಬಂದ ನಂತರ ಅಭಿಮಾನಿಗಳ ಜೊತೆ ಹೊಸ ಪೀಳಿಗೆಯ ಅಭಿಮಾನಿಗಳು ಇದ್ದಾರೆ. ಅವರು ಪ್ರಬುದ್ಧವಾದ ಚಿಂತನೆ ಇಟ್ಟುಕೊಂಡಿದ್ದರೆ ಸಾಮಾಜಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.
