ಉದಯವಾಹಿನಿ, ನವದೆಹಲಿ: ಬೌಲರ್ಗಳ ಕೆಲಸದ ಒತ್ತಡವನ್ನು ನಿಭಾಯಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತದ ವೇಗಿ ಭುವನೇಶ್ವರ ಕುಮಾರ್ ಅವರು ಜಸ್ಪ್ರಿತ್ ಬುಮ್ರಾ ಬೆಂಬಲಕ್ಕೆ ನಿಂತಿದ್ದಾರೆ. ಜಸ್ಪ್ರೀತ್ ಬುಮ್ರಾ ಕಾರ್ಯದೊತ್ತಡಕ್ಕೆ ಸಿಲುಕಿದ್ದರೆ ಕಳೆದ ಐಪಿಎಲ್ ಪಂದ್ಯಾವಳಿಯಲ್ಲೇ ವಿಶ್ರಾಂತಿ ಪಡೆಯಬಹುದಿತ್ತು, ಇಂಗ್ಲೆಂಡ್ ಸರಣಿ ವೇಳೆ ವಿಶ್ರಾಂತಿ ಕೊಡುವ ಅಗತ್ಯವಿರಲಿಲ್ಲ ಎಂದು ಮಾಜಿ ಆಟಗಾರ ದಿಲೀಪ್ ವೆಂಗ್ಸರ್ಕಾರ್ ಸೇರಿ ಹಲವರು ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಬುಮ್ರಾಗೆ ಭುವನೇಶ್ವರ ಬೆಂಬಲ ಸೂಚಿಸಿದ್ದಾರೆ.
‘ಪೋಡ್ಕಾಸ್ಟ್ ಟಾಕ್’ನೊಂದಿಗೆ ಮಾತನಾಡಿದ ಭುವನೇಶ್ವರ್, ಬುಮ್ರಾ ವಿಶ್ರಾಂತಿ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ‘‘ಬುಮ್ರಾ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಎಷ್ಟು ವರ್ಷದಿಂದ ಆಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕು. ಈ ಎಲ್ಲ ಮಾದರಿಯಲ್ಲಿ ಆಡುವುದು ಕಷ್ಟಕರ. ಬುಮ್ರಾ ಹೊಂದಿರುವ ಬೌಲಿಂಗ್ ಶೈಲಿಯಿಂದ ಅವರಿಗೆ ಗಾಯವಾಗಬಹುದು’’ ಎಂದರು.
‘‘ಐದು ಪಂದ್ಯಗಳಲ್ಲಿ ಮೂರರಲ್ಲಿ ಆಡುವುದರಿಂದ ಏನೂ ಸಮಸ್ಯೆ ಇಲ್ಲ. ಆ ಮೂರು ಪಂದ್ಯಗಳಲ್ಲಿ ಬುಮ್ರಾ ಉತ್ತಮವಾಗಿ ಆಡಬಲ್ಲರು ಎಂದು ಆಯ್ಕೆ ಸಮಿತಿಗೆ ಗೊತ್ತಿತ್ತು. ಬುಮ್ರಾ ಅವರು ಎಲ್ಲ ಐದು ಪಂದ್ಯಗಳಲ್ಲಿ ಆಡದೇ ಇದ್ದರೂ ಮೂರು ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’’ ಎಂದು ಭುವಿ ಹೇಳಿದರು.
