ಉದಯವಾಹಿನಿ, ತಿರುವನಂತಪುರಂ: ಭಾರತೀಯ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಸುರವರಂ ಸುಧಾಕರ ರೆಡ್ಡಿ ಅವರು ಶುಕ್ರವಾರ ತಡರಾತ್ರಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸುರವರಂ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
1942ರ ಮಾರ್ಚ್ 25ರಂದು ತೆಲಂಗಾಣದ ಮೆಹಬೂಬ್ನಗರ ಜಿಲ್ಲೆಯ ಕೊಂಡ್ರಾವಪಲ್ಲಿ ಗ್ರಾಮದಲ್ಲಿ ಜನಿಸಿದ ಸುರವರಂ ಸುಧಾಕರ ರೆಡ್ಡಿ ಎಡಪಂಥೀಯ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದರು. ವಿದ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. 15 ವರ್ಷ ವಯಸ್ಸಿನವರಾಗಿದ್ದಾಗಲೇ ಕರ್ನೂಲ್ನ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಆಂದೋಲನ ನಡೆಸಿ ಗಮನ ಸೆಳೆದಿದ್ದರು.
ರೆಡ್ಡಿ ಅವರು 1998-1999 ಮತ್ತು 2004-2009ರ ಅವಧಿಯಲ್ಲಿ 2 ಬಾರಿ ನಲ್ಗೊಂಡ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರು. ಸಂಸತ್ತಿನಲ್ಲಿದ್ದ ಅವಧಿಯಲ್ಲಿ, ಕಾರ್ಮಿಕರ ಹಕ್ಕುಗಳು, ಸಾಮಾಜಿಕ ನ್ಯಾಯ, ರೈತರು ಹಾಗೂ ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಲ್ಯಾಣಕ್ಕಾಗಿ ಹೋರಾಡಿದ್ದರು. ಅಷ್ಟೇ ಅಲ್ಲ ಸರ್ಕಾರದ ಭ್ರಷ್ಟಾಚಾರವನ್ನ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದರು.
2012 ರಿಂದ 2019ರ ವರೆಗೆ, ಅವರು ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮೂರು ಅವಧಿಗೆ ಈ ಹುದ್ದೆಯನ್ನು ಅಲಂಕರಿಸಿದ್ದ ಸುರವರಂ ಅವರು ಜೀವನದುದ್ದಕ್ಕೂ ಸಾಮೂಹಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸರಳ, ಸಜ್ಜನಿಕೆಯ ಜೀವನ ಶೈಲಿಯಿಂದಾಗಿ ಜನಮನ ಗೆದ್ದಿದ್ದರು.
