ಉದಯವಾಹಿನಿ, ರಾಮನಗರ: ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಸತ್ಯ ಗೊತ್ತಾಗುತ್ತದೆ. ಅವರು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕೆ.ಎನ್.ರಾಜಣ್ಣರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೇರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ನನಗಿರುವ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ಅವರು ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಈಗೇನೋ ದೆಹಲಿಯಲ್ಲಿ ಸಮಾವೇಶ ಮಾಡ್ತಾರಂತೆ ಮಾಡಲಿ. ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗ್ತಿದ್ದಾರೋ? ಇಲ್ವೋ? ಅಂತ ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದ್ರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜಣ್ಣ ಅವರನ್ನ ಸ್ವಾಗತ ಮಾಡ್ತಿರೋದು ಬಿಜೆಪಿ ನಾಯಕರೇ ಅಲ್ವಾ? ರಾಜಣ್ಣ ಈ ಹಿಂದೆ ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಅಂದಿದ್ದರು. ಈಗ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಗೊತ್ತಾಗಬೇಕು. ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಸೇರುತ್ತಾರೆ. ನಮ್ಮ ಸರ್ಕಾರ ಇಲ್ಲ ಅಂದಿದ್ರೆ ಇಷ್ಟೊತ್ತಿಗೆ ಅವರು ಬಿಜೆಪಿ ಸೇರಿರುತ್ತಿದ್ದರು. ಈಗಾಗಲೇ ಒಂದು ಕಾಲು ಅವರು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಜೊತೆಗೆ ಬಿಜೆಪಿ ಕೇಂದ್ರ, ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!