ಉದಯವಾಹಿನಿ , ಚಂಡೀಗಢ: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಪಂಜಾಬ್ನ ಆಪ್ ಶಾಸಕನನ್ನು ಬಂಧಿಸಿ ಕರೆದೊಯ್ಯುವಾಗ ಹರಿಯಾಣದ ಕರ್ನಾಲ್ ಬಳಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅತ್ಯಾಚಾರ ಆರೋಪದ ಮೇಲೆ ಪಂಜಾಬ್ ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಜ್ರರನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯ ಠಾಣೆಗೆ ಅವರನ್ನು ಕರೆದೊಯ್ಯುತ್ತಿದ್ದಾಗ ಕಾರಿನಲ್ಲಿ ಬಂದ ಅವರ ಬೆಂಬಲಿಗರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಳಿಕ ಹರ್ಮೀತ್ ಸಿಂಗ್, ತಮ್ಮ ಬೆಂಬಲಿಗರು ಬಂದಿದ್ದ ಸ್ಕಾರ್ಪಿಯೋ, ಎಸ್ಯುವಿಯಲ್ಲಿ ಪರಾರಿಯಾಗಿದ್ದಾರೆ.
ಪೊಲೀಸರು ಫಾರ್ಚೂನರ್ ಅನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಶಾಸಕ ಇನ್ನೊಂದು ಕಾರಿನಲ್ಲಿದ್ದಿದ್ದರಿಂದ ಎಸ್ಕೇಪ್ ಆಗಿದ್ದಾರೆ. ಇದೀಗ ಶಾಸಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಜಿರಾಕ್ಪುರದ ಮಹಿಳೆಯ ನೀಡಿದ ದೂರಿನಾಧಾರವಾಗಿ ಶಾಸಕ ಹರ್ಮೀತ್ ಸಿಂಗ್ ವಿರುದ್ಧ ಅತ್ಯಾಚಾರ, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಹರ್ಮೀತ್ ಸಿಂಗ್, ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಫೇಸ್ಬುಕ್ನಲ್ಲಿ ಲೈವ್ ಬಂದು, ದೆಹಲಿಯಲ್ಲಿರುವ ನಾಯಕತ್ವವು ಪಂಜಾಬ್ ಅನ್ನು ಅಕ್ರಮವಾಗಿ ಆಳುತ್ತಿದೆ ಎಂದು ಆರೋಪಿಸಿದ್ದರು.
