ಉದಯವಾಹಿನಿ, ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್ಶಿಪ್ ಬಗ್ಗೆ ಪರ-ವಿರೋಧ ಚರ್ಚೆ ವ್ಯಕ್ತವಾಗ್ತಿದ್ದು, ರಾಜ್ಯ ಸರ್ಕಾರದ ತೀರ್ಮಾನವನ್ನು ಕೆಲ ರೈತರು ಸ್ವಾಗತಿಸಿದ್ದಾರೆ.
ಯೋಜನೆಗೆ ಭೂಮಿ ನೀಡುವ ರೈತರಿಗೆ 1.5 ಕೋಟಿಯಿಂದ 2.5 ಕೋಟಿ ಪರಿಹಾರ ನೀಡುತ್ತಿರುವುದು ಸ್ವಾಗತ, ಪರಿಹಾರ ಬೇಡ ಎನ್ನುವವರಿಗೆ 50:50 ನಿವೇಶನ ಎಂಬ ನಿರ್ಧಾರ ನಮಗೆ ಸಂತಸ ತರಿಸಿದೆ. ಕಳೆದ 18 ವರ್ಷಗಳಿಂದ ನಮ್ಮ ಭೂಮಿ ರೆಡ್ ಝೋನ್ ಆಗಿತ್ತು. ಇದೀಗ ಸರ್ಕಾರ ರೈತರ ಪರವಾದ ತೀರ್ಮಾನ ಮಾಡಿದೆ. 2006ರಲ್ಲಿ ಕುಮಾರಸ್ವಾಮಿಯವರು ಟೌನ್ಶಿಪ್ಗಾಗಿ ಭೂಸ್ವಾಧೀನ ಮಾಡಿದ್ದರು. ಬಳಿಕ ಯೋಜನೆ ಕೈಬಿಟ್ಟು ನಮ್ಮ ಭೂಮಿ ರೆಡ್ ಝೋನ್ಗೆ ಸೇರಿತ್ತು. ಇದರಿಂದ ಯಾವುದೇ ಅಭಿವೃದ್ಧಿ ಇಲ್ಲದೇ ನಮಗೆ ಸಾಕಷ್ಟು ತೊಂದರೆ ಆಗಿದೆ ಎಂದರು.
ಬಿಜೆಪಿ ಸರ್ಕಾರ ಕೂಡಾ ರೆಡ್ ಝೋನ್ ತೆರವು ಮಾಡಿ ನಮ್ಮ ಜಮೀನು ಸಮಸ್ಯೆ ಬಗೆಹರಿಸಲಿಲ್ಲ. ಸದ್ಯ ಈಗಿನ ಸರ್ಕಾರ ನಮಗೆ ನ್ಯಾಯಯುತವಾದ ಪರಿಹಾರ ನೀಡಲು ಒಪ್ಪಿದೆ. ಸರ್ಕಾರದ ನಿರ್ಧಾರವನ್ನ ನಾವು ಗೌರವಿಸುತ್ತೇವೆ. ಈಗ ಪ್ರತಿಭಟನೆ ಮಾಡುತ್ತಿರುವ ಕೆಲ ರೈತರು ಹಿಂದೆ ಯೋಜನೆಯನ್ನ ಸ್ವಾಗತಿಸಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಬಿಡದಿ ಭಾಗದ ರೈತ ಮುಖಂಡ ರಾಜಣ್ಣ ಸರ್ಕಾರವನ್ನ ಅಭಿನಂದಿಸಿದ್ದಾರೆ.
