ಉದಯವಾಹಿನಿ, ನವದೆಹಲಿ: ಐತಿಹಾಸಿಕ ಕೆಂಪು ಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ 1.5 ಕೋಟಿ ಮೌಲ್ಯದ ಎರಡು ಚಿನ್ನದ ಕಲಶ ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅರ್ಚಕನ ವೇಷದಲ್ಲಿ ಬಂದ ಕಳ್ಳ ಬೆಲೆಬಾಳುವ ವಸ್ತುಗಳನ್ನ ದೋಚಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಈಗ ವೈರಲ್ ಆಗಿದೆ. ಕಳ್ಳ ಅರ್ಚಕನನ್ನ ಗುರುತಿಸಿದ್ದು. ಶೀಘ್ರದಲ್ಲೇ ಆತನನ್ನ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏನೇನು ಕಳ್ಳತನ:? ಕಳ್ಳ ಅರ್ಚಕ ಕದ್ದ ವಸ್ತುಗಳಲ್ಲಿ ಚಿನ್ನದ ಜರಿ (ಕಲಶ), ಸುಮಾರು 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ (ಕಲಸದ ಮೇಲಿಡುವ ತೆಂಗು ಮಾದರಿ ವಸ್ತು), ವಜ್ರಗಳು, ರತ್ನ ಹಾಗೂ ಮಾಣಿಕ್ಯಗಳಿಂದ ಕೂಡಿದ ಸಣ್ಣ ಗಾತ್ರದ 115 ಗ್ರಾಂ ಚಿನ್ನದ ಕಲಶ ಸೇರಿವೆ. ಈ ವಸ್ತುಗಳೆಲ್ಲವು ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿದ್ದಾಗಿದೆ. ಪ್ರತಿದಿನ ಅವರು ಆಚರಣೆಗಳಿಗಾಗಿ ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದರು ಎನ್ನಲಾಗಿದೆ. ಈ ವಸ್ತುಗಳನ್ನು ಪೂಜಾ ಕೈಂಕರ್ಯ, ಆಚರಣೆಗಳಲ್ಲಿ ಬಳಸುವುದು ಪವಿತ್ರ ಹಾಗೂ ಶ್ರೇಷ್ಠ ಅನ್ನೋದು ಜೈನರ ನಂಬಿಕೆ.
