ಉದಯವಾಹಿನಿ, ಅಮರಾವತಿ: ಆಂಧ್ರಪ್ರದೇಶದ ಚೋಡವರಂ ಸಬ್-ಜೈಲಿನಲ್ಲಿ ಜೈಲಧಿಕಾರಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಇಬ್ಬರು ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಪಿಂಚಣಿ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಪಂಚಾಯತ್ ಕಾರ್ಯದರ್ಶಿ ನಕ್ಕ ರವಿಕುಮಾರ್, ಜೈಲಿನ ಅಡುಗೆ ಕೋಣೆ ಬಳಿ ಜೈಲಧಿಕಾರಿ ವಾಸ ವೀರರಾಜು ಅವರ ಮೇಲೆ ಹಲ್ಲೆ ಮಾಡಿದ್ದ ಈ ವೇಳೆ ಜೈಲಧಿಕಾರಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಅವರ ಬಳಿಯಿದ್ದ ಜೈಲಿನ ಬೀಗದ ಕೀಯನ್ನು ಕಸಿದುಕೊಂಡಿದ್ದ. ಆ ಸಂದರ್ಭ ಕಳ್ಳತನದ ಆರೋಪದ ಮೇಲೆ ವಿಚಾರಣೆಯಲ್ಲಿದ್ದ ಮತ್ತೊಬ್ಬ ಕೈದಿ ಬೆಜವಾಡ ರಾಮು ಕೂಡ ರವಿಕುಮಾರ್ನೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಜೈಲಧಿಕಾರಿಗಳು ನೆರೆಯ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ನೀಡಿದ್ದು, ಪರಾರಿಯಾದ ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಜೈಲಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
