ಉದಯವಾಹಿನಿ, ದುಬೈ: ಸೆಪ್ಟಂಬರ್ 9 ರಿಂದ 28ರವರೆಗೆ ನಡೆಯುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಭಾರತ ತಂಡಕ್ಕೆ ಇಬ್ಬರು ಓಪನಿಂಗ್ ಬ್ಯಾಟ್ಸ್ಮನ್ಗಳನ್ನು ಮಾಜಿ ಕ್ರಿಕೆಟಿಗ ಮದನ್ ಲಾಲ್ ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಆರಂಭಿಕ ಸ್ಥಾನಕ್ಕೆ ಮೂವರು ಬ್ಯಾಟ್ಸ್ಮನ್ಗಳಿದ್ದಾರೆ. ಅಭಿಷೇಕ್ ಶರ್ಮಾ, ವಿಕೆಟ್ ಕೀಪರ್ ಸಂಜು ಸ್ಯಾಮನ್ ಹಾಗೂ ಉಪ ನಾಯಕ ಶುಭಮನ್ ಗಿಲ್ ಇದ್ದಾರೆ. ಈ ಮೂವರ ಪೈಕಿ ಇಬ್ಬರನ್ನು ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಮದನ್ ಲಾಲ್ ಆಯ್ಕೆ ಮಾಡಿದ್ದಾರೆ.
ದೀರ್ಘಾವಧಿ ಬಳಿಕ ಭಾರತ ಟಿ20 ತಂಡಕ್ಕೆ ಶುಭಮನ್ ಗಿಲ್ ಮರಳಿದ್ದಾರೆ ಹಾಗೂ ಅವರಿಗೆ ಉಪನಾಯಕನ ಸ್ಥಾನವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಅವರ ಪ್ಲೇಯಿಂಗ್ XI ಆಯ್ಕೆಯ ಬಗ್ಗೆ ಅನುಮಾನಗಳು ಉಂಟಾಗಿವೆ. ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಬಹುದು. ಆ ಮೂಲಕ ಸಂಜು ಸ್ಯಾಮ್ಸನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದೆಂದು ಹೇಳಲಾಗುತ್ತಿದೆ.
ಎಎನ್ಐ ಜೊತೆ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳ ಬಗ್ಗೆ ಮಾತನಾಡಿದ ಮದನ್ ಲಾಲ್, “ಅವರು ಚೆನ್ನಾಗಿ ಆಡಿದ್ದಾರೆ ಹಾಗೂ ಮುಂದೆಯೇ ಆಡಬಹುದೆಂಬ ಬಗ್ಗೆ ನನಗೆ ನಂಬಿಕೆ ಇದೆ. ಅಭಿಷೇಕ್ ಶರ್ಮಾ ಅವರು 225ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಹಾಗೂ ಶುಭಮನ್ ಗಿಲ್ ಅವರ ಸ್ಟ್ರೈಕ್ ರೇಟ್ 150ಕ್ಕೂ ಹೆಚ್ಚಿದೆ. ಟಿ20ಐ ಕ್ರಿಕೆಟ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳು ತುಂಬಾ ಮುಖ್ಯ. ಆರಂಭಿಕ ಆರು ಓವರ್ಗಳಲ್ಲಿ ಓಪನಿಂಗ್ ಬ್ಯಾಟ್ಸ್ಮನ್ಗಳು ಪಂದ್ಯವನ್ನು ಸೆಟ್ ಮಾಡುತ್ತಾರೆ. ನಂತರ 7, 8, 9 ಹಾಗೂ ಮುಂದುವರಿದು 16ನೇ ಓವರ್ವರೆಗೂ ಸರಾಸರಿಯಲ್ಲಿ ಬ್ಯಾಟ್ ಮಾಡಿದರೆ ಸಾಕು. ನಂತರ ಕೊನೆಯ 3-4 ಓವರ್ಗಳಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರಂಥ ಬಿಗ್ ಹಿಟ್ಟರ್ಗಳು ಆಡಬೇಕು,” ಎಂದು ಹೇಳಿದ್ದಾರೆ. 2025ರ ಏಷ್ಯಾ ಕಪ್ ಟೂರ್ನಿಯು ದುಬೈನಲ್ಲಿ ನಡೆಯಲಿದೆ. ಇಲ್ಲಿ ಆರ್ದ್ರತೆ ಜಾಸ್ತಿ ಇರುವ ಕಾರಣ, ಕಂಡೀಷನ್ಸ್ ಸ್ಪಿನ್ನರ್ಗಳಿಗೆ ನೆರವು ನೀಡಲಿದೆ. ಹಾಗಾಗಿ ಭಾರತ ತಂಡದಲ್ಲಿ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ಒಳಗೊಂಡ ಬಲಿಷ್ಠ ಸ್ಪಿನ್ ಪಡೆ ಇದೆ. ಇನ್ನು ಮೀಸಲು ಆಟಗಾರರ ಗುಂಪಿನಲ್ಲಿ ವಾಷಿಂಗ್ಟನ್ ಸುಂದರ್ ಇದ್ದಾರೆ.
