ಉದಯವಾಹಿನಿ, ಚಿಕ್ಕಬಳ್ಳಾಪುರ: ಬರದನಾಡು ಅಂದೇ ಖ್ಯಾತಿ ಪಡೆದಿದ್ದ ಚಿಕ್ಕಬಳ್ಳಾಪುರ ಜಿಲ್ಲೆ, ಇದೀಗ ಮಲೆನಾಡಿನಂತಾಗಿದೆ. ಕಳೆದ ಮೂರು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ-ಕುಂಟೆ, ಜಲಾಶಯಗಳು ಮೈದುಂಬಿ ಹರಿಯುತ್ತಿವೆ. ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಜಲಾಶಯ ನೀರಿನಿಂದ ತುಂಬಿ ಹರಿಯುತ್ತಿರುವುದು ಜನರಲ್ಲಿ ಹರ್ಷ ಮೂಡಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಿಂದ 80 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿರುವ ನೀರು ನಯನ ಮನೋಹರ ದೃಶ್ಯ ಸೃಷ್ಟಿಸಿದೆ. ಮಂಚೇನಹಳ್ಳಿ ರಾಯನಕಲ್ಲು ಕೆರೆ ಹಾಗೂ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿಗೂ ಮಳೆ ಜೀವ ತುಂಬಿದೆ. ಆದರೆ, ಭಾರೀ ಮಳೆಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮಂಚನಬಲೆ ಅಂಡರ್ ಪಾಸ್ ನೀರಿನಿಂದ ಮುಳುಗಡೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ.

ರೈತರಿಗೆ ಸಂಕಷ್ಟ: ಮುಷ್ಟೂರು ಕೆರೆ ಕೋಡಿ ಹರಿದು, ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಹಿಂಭಾಗದ ರಾಜಕಾಲುವೆಗಳ ಬದಲಿಗೆ ಹೊಲ-ತೋಟಗಳಿಗೆ ನೀರು ನುಗ್ಗಿದೆ. ದ್ರಾಕ್ಷಿ, ಗುಲಾಬಿ, ಎಲೆ ಕೋಸು, ಬದನೆಕಾಯಿ, ರಾಗಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಗಾಗಿವೆ. ರಾಜಕಾಲುವೆಗಳು ಹಾಗೂ ಚರಂಡಿಗಳು ಮುಚ್ಚಿಕೊಂಡಿರುವುದೇ ಹೊಲ-ತೋಟಗಳಿಗೆ ನೀರು ನುಗ್ಗಲು ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕೆರೆ-ಜಲಾಶಯಗಳು ತುಂಬಿ ಹರಿಯುತ್ತಿರುವುದು ಸಂತಸದ ಸಂಗತಿ. ಆದ್ರೆ, ರಾಜಕಾಲುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯದಿಂದ ನಮ್ಮ ಬೆಳೆಗಳು ಹಾನಿಯಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!