ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ತೆಲಂಗಾಣದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವ ಶಾಕಿಂಗ್ ಘಟನೆ ವರದಿಯಾಗಿದೆ. ಮೃತನನ್ನು 30 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ವಿವರಗಳ ಪ್ರಕಾರ, ಸೆಪ್ಟೆಂಬರ್ 3 ರಂದು ತಮ್ಮ ರೂಮ್ಮೇಟ್ ಜೊತೆ ನಡೆದ ಜಗಳದಲ್ಲಿ ನಿಜಾಮುದ್ದೀನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತನ ಕುಟುಂಬ ಈ ಘಟನೆಯನ್ನು ಜನಾಂಗೀಯ ತಾರತಮ್ಯ ಎಂದು ಆರೋಪಿಸಿದ್ದು, ಆದ್ದರಿಂದ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರು ವಾಷಿಂಗ್ಟನ್, ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ಗೆ ಬರೆದ ಪತ್ರದಲ್ಲಿ ತಮ್ಮ ಮಗನ ಸಾವಿನ ಬಗ್ಗೆ ಮಾಹಿತಿ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ನಂತರ, ಅವರು ತಮ್ಮ ಮಗನ ಮೃತದೇಹವನ್ನು ಮೆಹಬೂಬ್ನಗರಕ್ಕೆ ತರಲು ಸಹಾಯ ಮಾಡುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಮನವಿ ಮಾಡಿದರು.
ಮಾಧ್ಯಮದ ಜೊತೆ ಮಾತನಾಡಿದ ಮೃತರ ತಂದೆ, ನಿಜಾಮುದ್ದೀನ್ ಅವರ ಸ್ನೇಹಿತರಿಂದ ಘಟನೆಯ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ. ಆತನನ್ನು ಸಾಂತಾ ಕ್ಲಾರಾ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಮೃತದೇಹಗಳು ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿರುವ ಯಾವುದೋ ಆಸ್ಪತ್ರೆಯಲ್ಲಿವೆ ಎಂದು ನನಗೆ ತಿಳಿಯಿತು ಎಂದು ನಿಜಾಮುದ್ದೀನ್ ಅವರ ತಂದೆ ಹೇಳಿರುವುದಾಗಿ ವರದಿಯಾಗಿದೆ. ಪೊಲೀಸರು ಅವರನ್ನು ಏಕೆ ಗುಂಡಿಕ್ಕಿ ಕೊಂದರು ಎಂಬುದಕ್ಕೆ ನಿಜವಾದ ಕಾರಣಗಳು ನನಗೆ ತಿಳಿದಿಲ್ಲ.
