ಉದಯವಾಹಿನಿ, ತಿರುಪತಿ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ವಿಷಕಾರಿ ಹಾವೊಂದು ಕಚ್ಚಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಪ್ರತೀಕಾರವಾಗಿ ಅದರ ತಲೆಯನ್ನೇ ಕಚ್ಚಿ ಕೊಂದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಆಶ್ಚರ್ಯವನ್ನು ಮೂಡಿಸಿದೆ. ಮದ್ಯಪಾನದ ನಶೆಯಲ್ಲಿದ್ದ ವೆಂಕಟೇಶ್ ಎಂಬ ವ್ಯಕ್ತಿ ಮನೆಗೆ ಹಿಂತಿರುಗುತ್ತಿದ್ದಾಗ ಕಪ್ಪು ಹಾವೊಂದು ಆತನನ್ನು ಕಚ್ಚಿತು. ಆಗ ಆತ ತಕ್ಷಣವೇ ಹಾವನ್ನು ಹಿಡಿದು, ಅದರ ತಲೆಯನ್ನು ಕಚ್ಚಿ ಕೊಂದನು. ಸ್ಥಳೀಯರ ಪ್ರಕಾರ, ವೆಂಕಟೇಶ್ ಕೊಂದ ಹಾವನ್ನು ಕೈಯಲ್ಲಿ ಹಿಡಿದು ಮನೆಗೆ ತಂದು, ಅದನ್ನು ತನ್ನ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ದನು.
ಮಧ್ಯರಾತ್ರಿಯ ವೇಳೆಗೆ ವೆಂಕಟೇಶ್ ಆರೋಗ್ಯ ಹದಗೆಟ್ಟಿತು, ಕಾರಣ ಹಾವಿನ ವಿಷ ಆತನ ದೇಹದಲ್ಲಿ ಅದಾಗಲೇ ಹರಡಿತ್ತು. ಕುಟುಂಬಸ್ಥರು ತಕ್ಷಣವೇ ಆತನನ್ನು ಶ್ರೀಕಾಳಹಸ್ತಿ ಪ್ರದೇಶದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ, ಆತನ ಸ್ಥಿತಿ ಗಂಭೀರವಾಗಿದ್ದರಿಂದ ಶುಕ್ರವಾರ ಬೆಳಗ್ಗೆ ತಿರುಪತಿಯ ರೂಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಆತ ವೈದ್ಯರ ನಿಗದಲ್ಲಿದ್ದಾನೆ.
ಈ ಘಟನೆಯು ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿದೆ. “ಇಂತಹ ಘಟನೆಯನ್ನು ಕೇಳಿಯೇ ಇಲ್ಲ, ಇದು ಭಯಾನಕವಾಗಿದೆ,” ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಷಕಾರಿ ಹಾವಿನ ಕಡಿತದಿಂದ ಉಂಟಾಗುವ ಗಂಭೀರತೆಯ ಬಗ್ಗೆ ಜಾಗೃತಿಯ ಕೊರತೆಯಿಂದ ವೆಂಕಟೇಶ್ನ ಈ ರೀತಿ ಎಂದು ಸ್ಥಳೀಯರು ಶಂಕಿಸಿದ್ದಾರೆ. ವಿಷಕಾರಿ ಹಾವುಗಳ ಕಡಿತದಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯವನ್ನು ಈ ಘಟನೆ ಒತ್ತಿಹೇಳಿದೆ.
