ಉದಯವಾಹಿನಿ, ಮಡಿಕೇರಿ: ತನ್ನ ಜೀವವನ್ನು ಲೆಕ್ಕಿಸದ ಅಂಬುಲೆನ್ಸ್ ಚಾಲಕನೊಬ್ಬ ವಾಹನದ ಬ್ರೇಕ್ ಫೇಲ್ ಆಗಿದ್ರೂ ಗರ್ಭಿಣಿ ಮಹಿಳೆಯೊಬ್ಬರನ್ನ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ ಘಟನೆ ನಡೆದಿದೆ.
ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನ ಕರೆದೊಯ್ಯುವಾಗ ವಾಹನದ ಹಿಂದಿನ ಚಕ್ರ ಬ್ಲಾಕ್ ಆಗಿ ಬ್ರೇಕ್ ಫೇಲ್ ಆಗಿತ್ತು. ಆದಾಗ್ಯೂ ಅಂಬುಲೆನ್ಸ್ ಚಾಲಕ ಮಹಿಳೆಯನ್ನ ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಜೊತೆಗೆ ಹಿಂದಿರುಗಿ ಬರುವಾಗ ರಸ್ತೆ ಅಪಘಾತದಲ್ಲಿ ಹೆಡ್ಇಂಜುರಿ ಆಗಿ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನ ಬಿಳಿಕೆರೆಯಿಂದ ಹುಣಸೂರು ಆಸ್ಪತ್ರೆಗೆ ಸಾಗಿಸಿ ಸಾಹಸ ಮೆರೆದಿದ್ದಾರೆ.
ಚಾಲಕನ ಬಿ.ಎಸ್ ವೆಂಕಟೇಶ್ (ಕಿಶೋರ್ ಪೂಜಾರಿ) ಸಾಹಸಕ್ಕೆ ಕೊಡಗಿನಾದ್ಯಂತ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೆಂಕಟೇಶ್ ಸದ್ಯ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲೂ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ನೆರವಾಗಿದ್ದರು. ಒಟ್ನಲ್ಲಿ ಯಾವ್ದೇ ಕಪ್ಪು ಚುಕ್ಕೆಯಿಲ್ಲದೇ ರೋಗಿಗಳಿಗೆ ತಕ್ಷಣಕ್ಕೆ ಸಿಗಬಲ್ಲ ಮತ್ತು ರೋಗಿಗಳ ಬಗ್ಗೆ ಅತೀವ ಕಾಳಜಿಯುಳ್ಳಂತಹ ನಿಮ್ಮಂತಹ ಸಮಾಜಮುಖಿ ಮನಸ್ಸುಗಳು ಮತ್ತಷ್ಟು ಹೆಚ್ಚಾಗಲಿ ಅಂತ ಜಿಲ್ಲೆಯ ಜನರು ಆಶಿಸುತ್ತಿದ್ದಾರೆ.
