ಉದಯವಾಹಿನಿ , ನವದೆಹಲಿ: 17 ವಿದ್ಯಾರ್ಥಿನಿಯರಿಗೆ ಲೈಗಿಂಕ ಕಿರುಕುಳ ಆರೋಪ ಹೊತ್ತಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಕಳೆದ 40 ದಿನಗಳಲ್ಲಿ 13 ಹೋಟೇಲ್ಗಳನ್ನು ಬದಲಿಸಿದ್ದ ಎಂದು ಮೂಲಗಳು ಹೇಳಿವೆ. ಸಾಮಾನ್ಯ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಸ್ವಾಮೀಜಿ ಸಣ್ಣ ಸಣ್ಣ ಹೋಟೇಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದ ಅನ್ನೋದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ತನಿಖೆಗೆ ಸಹಕರಿಸುತ್ತಿಲ್ಲ, ಯಾವುದೇ ಪ್ರಶ್ನೆ ಕೇಳಿದ್ರೂ ಗೊತ್ತಿಲ್ಲ, ಇಲ್ಲ ಎಂದು ಉತ್ತರ ಹೇಳುತ್ತಿದ್ದಾರೆ. ವಿಚಾರಣೆ ವೇಳೆ ನನಗೆ ಪ್ರಧಾನಿ ನರೇಂದ್ರ ಮೋದಿ ಗೊತ್ತು, ಪ್ರಧಾನಿ ಕಚೇರಿ ಜೊತೆಗೆ ನೇರ ಸಂಪರ್ಕ ಹೊಂದಿದ್ದೇನೆ ಎಂದು ಬೆದರಿಸುವ ಪ್ರಯತ್ನ ಮಾಡಿದ್ದಾರೆ.
ತನಿಖೆಯ ವೇಳೆ ಆರೋಪಿಯ ಕೋಣೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಛಾಯಾಚಿತ್ರಗಳು ಕಂಡುಬಂದಿವೆ, ಪ್ರಾಥಮಿಕ ತನಿಖೆಯಲ್ಲಿ ಈ ಚಿತ್ರಗಳನ್ನು AI ಬಳಸಿ ರಚಿಸಲಾಗಿದೆ ಅನ್ನೋದು ಗೊತ್ತಾಗಿದೆ. ನಕಲಿ ವಿಸಿಟಿಂಗ್ ಕಾರ್ಡ್ಗಳನ್ನು ಸಹ ಪತ್ತೆಹಚ್ಚಿದ್ದು, ಅದು ವಿಶ್ವಸಂಸ್ಥೆ ಮತ್ತು ಬ್ರಿಕ್ಸ್ ಜೊತೆಗಿನ ಆತನ ಸಂಬಂಧ ತೋರಿಸುತ್ತದೆ. ಅವುಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
