ಉದಯವಾಹಿನಿ, ಟ್ರಿನವದೆಹಲಿ: ದೇಶಿ ಕ್ರಿಕೆಟ್ ಋತುವಿನ ಆರಂಭಕ್ಕೂ ಮುನ್ನ ಮುಂಬೈ ಮತ್ತು ಮಹಾರಾಷ್ಟ್ರ ನಡುವಿನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಶತಕವನ್ನು ಸಿಡಿಸಿದ್ದಾರೆ. ಮುಂಬೈ ತಂಡವನ್ನು ತೊರೆದ ನಂತರ ಪೃಥ್ವಿ ಶಾ, ಇದೀಗ ಮಹಾರಾಷ್ಟ್ರ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ ಶಾ ತಮ್ಮ ಹಿಂದಿನ ತಂಡದ (ಮುಂಬೈ) ಮಾಜಿ ಸಹ ಆಟಗಾರರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಮುಶೀರ್ ಖಾನ್ ಸೇರಿದಂತೆ ಮುಂಬೈ ಆಟಗಾರರ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಸರ್ಫರಾಝ್ ಖಾನ್ ಅವರ ಸಹೋದರ ಮುಶೀರ್ ಖಾನ್ ಔಟ್ ಮಾಡಿದರು. ಪೃಥ್ವಿ ಶಾ, ಮುಶೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ, ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದ್ದರು. ಮುಶೀರ್ ಖಾನ್ ಮತ್ತು ಪೃಥ್ವಿ ಶಾ ನಡುವೆ ವಾಗ್ವಾದ ನಡೆಯಿತು. ಮುಂಬೈ ಆಟಗಾರರು ಶಾ ಅವರನ್ನು ಸುತ್ತುವರೆದು ಗುಂಪು ಗುಂಪಾಗಿ ಜಮಾಯಿಸಿದರು. ಅಂಪೈರ್ ಮಧ್ಯಪ್ರವೇಶಿಸಿ ಮುಶೀರ್ ಮತ್ತು ಪೃಥ್ವಿ ಶಾ ಅವರನ್ನು ಬೇರ್ಪಡಿಸಿದರು. ನಂತರ, ಪೃಥ್ವಿ ಶಾ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಅವರು ಸಿದ್ಧೇಶ್ ಲಾಡ್ ಅವರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆಯೂ ಅಂಪೈರ್ಗಳು ಮಧ್ಯೆ ಪ್ರವೇಶಿಸಿ ಆಟಗಾರರನ್ನು ತಣ್ಣಗಾಗಿಸಿದ್ದರು.
ಪೃಥ್ವಿ ಶಾ ತಮ್ಮ ಹಿಂದಿನ ತಂಡದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು ಹಾಗೂ ಶತಕವನ್ನು ಬಾರಿಸಿದರು. ಅವರು 220 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು ಮೂರು ಸಿಕ್ಸರ್ಗಳನ್ನು ಒಳಗೊಂಡಂತೆ 181 ರನ್ಗಳನ್ನು ಬಾರಿಸಿದರು. ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಬೇಕೆಂಬ ಗುರಿಯನ್ನು ಹೊಂದಿರುವ ಅವರು, ಈ ಬಾರಿ ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಲು ಎದುರು ನೋಡುತ್ತಿದ್ದಾರೆ. ಆ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳುವ ಯೋಜನೆಯಲ್ಲಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಶತಕವನ್ನು ಬಾರಿಸಿದ್ದರು.
