ಉದಯವಾಹಿನಿ, ಮುಂಬಯಿ: ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಮೂರು ಏಕದಿನ ಪಂದ್ಯಗಳು ಮತ್ತು ನಂತರ ಅಕ್ಟೋಬರ್ 29 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ T20I ಸರಣಿಯೊಂದಿಗೆ ಪೂರ್ಣ ಪ್ರಮಾಣದ ಪ್ರವಾಸಕ್ಕಾಗಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. 7 ತಿಂಗಳ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿರುವುದರಿಂದ ಮತ್ತು ಶುಭಮನ್ ಗಿಲ್ ಏಕದಿನ ತಂಡದ ನೂತನ ನಾಯಕರಾಗಿರುವುದು ಈ ಪ್ರವಾಸದ ವಿಶೇಷತೆ. ಆದರೆ ಸರಣಿ ಆರಂಭಕ್ಕೂ ಮುನ್ನ ಭಾರತವು ತನ್ನ ಸ್ಟಾರ್ ಆಲ್ರೌಂಡರ್ಗಳಲ್ಲಿ ಒಬ್ಬರಾದ ಶಿವಂ ದುಬೆ ಅವರಿಗೆ ಗಾಯದ ಚಿಂತೆಯನ್ನು ಎದುರಿಸುತ್ತಿದೆ.
ಫೆಬ್ರವರಿ-ಮಾರ್ಚ್ನಲ್ಲಿ ನಡೆಯುವ 2026 ರ T20 ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಭಾರತ ತಂಡವು ಅಗ್ರ ತಂಡವನ್ನು ಎದುರಿಸಲಿರುವ ಕಾರಣ ಈ ಟಿ20 ಸರಣಿ ಮಹತ್ವದ ಪಾಮುಖ್ಯತೆ ಪಡೆದಿದೆ. ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಶಿವಂ ದುಬೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಶ್ರೀನಗರದಲ್ಲಿ ಬುಧವಾರ ಆರಂಭಗೊಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿಲ್ಲ ಎನ್ನಲಾಗಿದೆ. ಮುಂಬೈ ತಂಡದಲ್ಲಿ ಸ್ಥಾನ ಪಡೆದಿರುವ ದುಬೆ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಅಲ್ಲಿನ ಶೀತ ವಾತಾವರಣವು ಅವರ ಬೆನ್ನು ನೋವಿಗೆ ಕಾರಣವಾಯಿತು. ಇದರಿಂದಾಗಿ ಅವರು ಮುಂಬೈಗೆ ಮತ್ತೆ ವಾಪಸ್ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ.
