ಉದಯವಾಹಿನಿ, ಇತ್ತೀಚಿಗೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆಯಾಗಿವೆ. ಜನಪ್ರಿಯ ಕಾದಂಬರಿಗಳನ್ನು ತೆರೆಮೇಲೆ ತರುವ ಸಾಹಸಕ್ಕೆ ಯಾರು ಕೈ ಹಾಕುತ್ತಿಲ್ಲ. ಆದರೀಗ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸುಪ್ರಸಿದ್ಧ ಜುಗಾರಿ ಕ್ರಾಸ್ ತೆರೆಮೇಲೆ ಬರುತ್ತಿದೆ. ಜುಗಾರಿ ಕ್ರಾಸ್ ಕಾದಂಬರಿಗೆ ಸಿನಿಮಾ ರೂಪ ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ. ಈಗಾಗಲೇ ಕರಾವಳಿ ಸಿನಿಮಾ ಮೂಲಕ ಭಾರೀ ಸದ್ದು ಮಾಡುತ್ತಿರುವ ನಿರ್ದೇಶಕ ಗುರುದತ್ ಇದೀಗ ಜುಗಾರಿ ಕ್ರಾಸ್ನ್ನು ದೊಡ್ಡ ಪರದೆ ಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಜುಗಾರಿ ಕ್ರಾಸ್ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಇದೀಗ ಟೀಸರ್ ರಿಲೀಸ್ ಆಗಿದೆ. ಜುಗಾರಿ ಕ್ರಾಸ್ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಈ ಜನಪ್ರಿಯ ಕಾದಂಬರಿಗೆ ಹೀರೋ ಯಾರು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆದರೀಗ ಟೀಸರ್ ಜೊತೆಗೆ ಹೀರೋ ಯಾರು ಎನ್ನುವ ಕುತೂಹಲಕ್ಕೂ ತೆರೆಬಿದ್ದಿದೆ. ಜುಗಾರಿ ಕ್ರಾಸ್ಗೆ ನಾಯಕನಾಗಿ ರಾಜ್ ಬಿ ಶೆಟ್ಟಿ (Raj B Shetty )ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್ನಲ್ಲಿ ತಲೆಬುರಡೆ, ಹರಿಯುತ್ತಿರುವ ರಕ್ತ, ಕೆಂಪು ರತ್ನ ಜೊತೆಗೆ ಕುತೂಹಲ ಮತ್ತಷ್ಟು ದುಪ್ಪಟ್ಟು ಮಾಡುವಂತೆ ಇರುವ ಬ್ಯಾಗ್ರೌಂಡ್ ಮ್ಯೂಸಿಕ್, ಪವರ್ ಪ್ಯಾಕ್ಡ್ ಟೀಸರ್ ನೋಡುತ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ
