ಉದಯವಾಹಿನಿ, ಸ್ಯಾಂಡಲ್ವುಡ್ ನಟಿ ಸಂಗೀತಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಅವರು ಮಕ್ಕಳು ಬೇಡ ಎಂದು ಹೇಳಿದ ಮಾತು ಸಾಕಷ್ಟು ವೈರಲ್ ಆಗಿತ್ತು. ಒಂದು ರೀತಿಯಲ್ಲಿ ವಿವಾದವನ್ನೇ ಸೃಷ್ಟಿ ಮಾಡಿತ್ತು. ಆದರೆ ಅದಕ್ಕೆ ಅಸಲಿ ಕಾರಣ ಈಗ ಆಸ್ಪತ್ರೆಗೆ ದಾಖಲಾಗಿರೋದು ಇರಬಹುದಾ ಎನ್ನುವಂತಿದೆ. ಆಸ್ಪತ್ರೆಗೆ ದಾಖಲಾದ ಸಂಗೀತಾ ಭಟ್ ಮಹಿಳೆಯರಿಗೆ ಆರೋಗ್ಯ ಸಂದೇಶ ಕೊಟ್ಟಿದ್ದಾರೆ.
ಸಂಗೀತಾ ಭಟ್ ‘ಹೈಸ್ಟರೊಸ್ಕೋಪಿಕ್ ಪೊಲಿಫೆಕ್ಟಮಿ’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಗರ್ಭಾಶಯದೊಳಗೆ 1.75ಸೆಂ.ಮೀ.ಗಳಷ್ಟು ಬೆಳವಣಿಗೆಯಾದ ಗರ್ಭಾಶಯದ ಪಾಲಿಪ್ ಇರುವುದು ಪತ್ತೆಯಾಗಿದೆ. ಇದನ್ನ ಗರ್ಭಾಶಯದ ಗೆಡ್ಡೆ ಎಂದು ಎಂದು ಸಂಗೀತಾ ಸಾಮಾಜಿಕ ಜಾಳತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಕಾಯಿಲೆಯಿಂದ ರಕ್ತಸ್ರಾವ, ಮಾರಣಾಂತಿಕ ನೋವು, ಅನಿಯಮಿತ ಚಕ್ರಗಳು, ಹಾರ್ಮೋನುಗಳ ಅಡಚಣೆಗಳು, ಮೊಡವೆಗಳು, ತೂಕ ಹೆಚ್ಚಾಗುವುದು, ಕೂದಲು ಉದುರುವಿಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಈ ರೀತಿ ಗೆಡ್ಡೆ ಕಾಣಿಸಿಕೊಂಡ ಬಳಿಕ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಂತಿಮವಾಗಿ ನಿರ್ಧರಿಸಲು ನನಗೆ ಒಂದು ತಿಂಗಳು ಬೇಕಾಯಿತು ಎಂದಿದ್ದಾರೆ ಸಂಗೀತಾ. ಕೆಲಸದ ಕಮಿಟ್ಮೆಂಟ್ ನಡುವೆ, ಅದನ್ನು ವಿಳಂಬ ಮಾಡುತ್ತಲೇ ಬಂದಿದ್ದ ಸಂಗೀತಾ ಭಟ್, ಪ್ರತಿ ಮಹಿಳೆಯರು ಅನಿಯಮಿತ ರಕ್ತಸ್ರಾವ, ಮುಟ್ಟಿನ ಸಮಯ, ಹಾರ್ಮೋನ್ಗಳಲ್ಲಿ ವ್ಯತ್ಯಾಸವಿದ್ದರೆ ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದಾರೆ.
