ಉದಯವಾಹಿನಿ, ಭೋಪಾಲ್: ಆಘಾತಕಾರಿ ಪ್ರಕರಣದಲ್ಲಿ, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ತನ್ನ ಒಂಬತ್ತು ವರ್ಷದ ಮಗನ ಶವವನ್ನು ಹೊತ್ತೊಯ್ಯುತ್ತಿದ್ದ ತಾಯಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಶವಪರೀಕ್ಷೆಗೆ ಮಗನ ಮೃತದೇಹವನ್ನು ಹಸ್ತಾಂತರಿಸಲು ತಾಯಿ ನಿರಾಕರಿಸಿದ್ದು, ಘಟನೆಗೆ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಶಹದೋಲ್ ಜಿಲ್ಲೆಯ ಜೈತ್ಪುರದ ಹಳ್ಳಿಯಲ್ಲಿ ಬಾಲಕನಿಗೆ ಹಾವು ಕಚ್ಚಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಮಗನ ಶವವನ್ನು ಹೊತ್ತೊಯ್ಯುತ್ತಿದ್ದಾಗ, ತಾಯಿ ಆಸ್ಪತ್ರೆಯ ಹೊರಗೆ ಅಳುತ್ತಾ ನಿಂತಿದ್ದರು. ಸಂತೋಷ್ ಸಿಂಗ್ ಪರಿಹಾರ್ ಎನ್ನುವ ಹೆಡ್ಕಾನ್ಸ್ಟೇಬಲ್ ಆಕೆಯ ಬಳಿಗೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸುವಂತೆ ಕೇಳಿಕೊಂಡರು. ನೊಂದ ತಾಯಿ ತಡೆದು ಶವ ಹಸ್ತಾಂತರಿಸಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸಂತೋಷ್ ಪರಿಹಾರ್ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
