ಉದಯವಾಹಿನಿ, ಕಾಬೂಲ್: ಭಾರತದ ನಂತರ ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನವು ತನ್ನ ಭೂಪ್ರದೇಶದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಹರಿವು ತಡೆಯಲು ಯೋಜಿಸುತ್ತಿದೆ. ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಅವರು, ಕುನಾರ್ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವಂತೆ ಆದೇಶಿಸಿದ್ದಾರೆ. ಕುನಾರ್ನಲ್ಲಿ ಅಣೆಕಟ್ಟುಗಳ ನಿರ್ಮಾಣವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು. ವಿದೇಶಿ ಕಂಪನಿಗಳಿಗೆ ಕಾಯದೇ ಆಂತರಿಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಾಲಿಬಾನ್ ಜಲ ಸಚಿವ ಅಬ್ದುಲ್ ಲತೀಫ್ ಮನ್ಸೂರ್ ತಿಳಿಸಿದ್ದಾರೆ.
ಅಲ್ಲದೇ ಆಫ್ಘನ್ನರು ತಮ್ಮದೇ ಆದ ಜಲ ಸಂಪನ್ಮೂಲಗಳನ್ನ ನಿರ್ವಹಿಸುವ ಹಕ್ಕು ಹೊಂದಿದ್ದಾರೆ. ನೀರು ಮತ್ತು ನದಿ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಅಂತ ಮನ್ಸೂರ್ ಪ್ರತಿಪಾದಿಸಿದ್ದಾರೆ.ಕಳೆದ ಮೇ ತಿಂಗಳಲ್ಲಿ ತಾಲಿಬಾನ್ ಆಡಳಿತದ ಸೇನಾ ಜನರಲ್ ಮುಬಿನ್, ಕುನಾರ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ಬಳಿಕ ಹಣ ಸಂಗ್ರಹಿಸಿ ಅಣೆಕಟ್ಟು ನಿರ್ಮಿಸಲು ತಾಲಿಬಾನ್ ಸರ್ಕಾರಕ್ಕೆ ಒತ್ತಾಯಿಸಿದ್ದರು.ಕುನಾರ್ ಪಾಕಿಸ್ತಾನದ ಚಿತ್ರಾಲ್ ಪ್ರದೇಶದಿಂದ (Chitral Area) ಉಗಮವಾಗುವ 480 ಕಿಮೀ ಉದ್ದದ ನದಿಯಾಗಿದೆ. ಇದು ಅಫ್ಘಾನಿಸ್ತಾನದ ನಂಗಹಾರ್ ಮತ್ತು ಕುನಾರ್ ಪ್ರಾಂತ್ಯಗಳ ಮೂಲಕ ಹಾದುಹೋಗಲಿದ್ದು, ಸಿಂಧೂ ನದಿ ಸೇರುತ್ತದೆ. ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಹರಿಯುವ ಕಾಬೂಲ್ ಮತ್ತು ಕುನಾರ್ ನದಿಗಳು ಪಾಕಿಸ್ತಾನಕ್ಕೆ ಅತಿದೊಡ್ಡ ನೀರಿನ ಮೂಲಗಳಾಗಿವೆ.
