ಉದಯವಾಹಿನಿ , ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ ಪಶ್ಚಿಮದ ಅಡಚಣೆಯಿಂದಾಗಿ ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಪಶ್ಚಿಮದ ಅಡಚಣೆಯಿಂದಾಗಿ ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ, ದೆಹಲಿ ಸರ್ಕಾರ ಅ.29 ರಿಂದ 2 ದಿನಗಳ ಕಾಲ ಕೃತಕ ಮಳೆ ಸುರಿಸುವ ಯೋಜನೆ ಪ್ರಕಟಿಸಿದೆ.
ಹೌದು. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಆನಂದ್ ವಿಹಾರ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ (AQI) 420 ನಷ್ಟಿದೆ. ಇಂದು ಬೆಳಗ್ಗೆ ಕೂಡ ವಾಯುಗುಣಮಟ್ಟ ತೀವ್ರ ಕಳಪೆ ಮಟ್ಟದಲ್ಲಿ ಕಂಡುಬಂದಿದೆ. ಪರಿಸ್ಥಿತಿ ಹದಗೆಡುತ್ತಿರುವುದರಿಂದ ದೆಹಲಿ ಸರ್ಕಾರ ಮುಂದಿನ ವಾರದಲ್ಲಿ 2 ದಿನಗಳ ಕಾಲ ಕೃತಕ ಮಳೆಗೆ ಸುರಿಸುವ ಯೋಜನೆ ಹಾಕಿಕೊಂಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅಕ್ಟೋಬರ್ 28 ಎಂದು ಮೋಡಬಿತ್ತನೆ ನಡೆಯಲಿದೆ. ಪರಿಸ್ಥಿತಿ ಅನುಕೂಲಕರವಾಗಿದ್ದರೆ, ಅ.29 ಮತ್ತು 30 ರಂದು ದೆಹಲಿಯಲ್ಲಿ ಮೊದಲ ಕೃತಕ ಮಳೆ ಸುರಿಯಲಿದೆ.
