
ಉದಯವಾಹಿನಿ, ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಐದು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಎದುರು ನಮ್ಮ ತಂಡಕ್ಕೆ ಪರೀಕ್ಷೆ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ. ಇಂಡೋ ಹಾಗೂ ಆಸೀಸ್ ನಡುವಣ ಮೊದಲನೇ ಟಿ20ಐ ಪಂದ್ಯ ಅಕ್ಟೋಬರ್ 29 ರಂದು ಕ್ಯಾನ್ಬೆರಾದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ಟಿ20ಐ ಸರಣಿ ಆರಂಭವಾಗಲಿದೆ. ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅಭಿಷೇಕ್ ಶರ್ಮಾ, ಅತಿ ಹೆಚ್ಚು ರನ್ಗಳನ್ನು ಕಲೆ ಹಾಕಿದ್ದರು. ಇದೀಗ ಅದೇ ಲಯವನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲಿ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಬಲ್ಲ ಅಭಿಷೇಕ್ ಶರ್ಮಾ ಅವರು ನಮ್ಮ ತಂಡದ ಬೌಲರ್ಗಳಿಗೆ ಪರೀಕ್ಷಯನ್ನು ತಂದೊಡ್ಡಲಿದ್ದಾರೆಂದು ತಿಳಿಸಿದ್ದಾರೆ.
ಅಭಿಷೇಕ್ ಶರ್ಮಾ ಸವಾಲುದಾಯಕ ಆಟಗಾರ: ಮಿಚೆಲ್ ಮಾರ್ಷ್: “ಅಭಿಷೇಕ್ ಶರ್ಮಾ ಅವರು ಅಸಾಧಾರಣ ಪ್ರತಿಭೆಯಾಗಿದ್ದಾರೆ ಹಾಗೂ ಭಾರತ ತಂಡಕ್ಕೆ ಅದ್ಭುತ ಆರಂಭವನ್ನು ತಂದುಕೊಡಲಿದ್ದಾರೆ. ಅವರು ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿಯೂ ಅಸಾಧಾರಣ ಪ್ರದರ್ಶನವನ್ನು ತೋರಿದ್ದರು. ಅವರ ಎದುರು ನಮಗೆ ಖಂಡತವಾಗಿಯೂ ಸವಾಲು ಎದುರಾಗಲಿದೆ ಹಾಗೂ ನಮಗೆ ಬೇಕಾಗಿರುವುದು ಕೂಡ ಇದೇ. ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಬ್ಯಾಟ್ಸ್ಮನ್ಗಳ ಎದುರು ನಿಮಗೆ ಯಾವಾಗಲೂ ಪರೀಕ್ಷೆ ಎದುರಾಗಲಿದೆ. ನಾವು ಇದನ್ನು ಎದುರು ನೋಡುತ್ತಿದ್ದೇವೆ,” ಎಂದು ಸುದ್ದಿಗೋಷ್ಠಿಯಲ್ಲಿ ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಟಿ20ಐ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಭಿಷೇಕ್ ಶರ್ಮಾ ಭಯಾನಕ ಆರಂಭವನ್ನು ಪಡೆದುಕೊಂಡಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 23 ಇನಿಂಗ್ಸ್ಗಳಿಂದ 36.91ರ ಸರಾಸರಿಯಲ್ಲಿ ಎರಡು ಶತಕಗಳು ಹಾಗೂ ಐದು ಅರ್ಧಶತಕಗಳ ಮೂಲಕ 849 ರನ್ಗಳನ್ನು ಬಾರಿಸಿದ್ದಾರೆ. ಅವರು ಸದ್ಯ ಐಸಿಸಿ ಟಿ20ಐ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಸದ್ಯ 926 ಪಾಯಿಂಟ್ಸ್ ಹೊಂದಿದ್ದಾರೆ.
