ಉದಯವಾಹಿನಿ, ಭೋಪಾಲ್: ಮಧ್ಯಪ್ರದೇಶದ ಸಾಗರ ಗ್ರಾಮದಲ್ಲಿನ ಜಾಮಾ ಮಸೀದಿ ಬಳಿ ಕಾಮಗಾರಿಗಾಗಿ ನೆಲ ಅಗೆಯುತ್ತಿದ್ದಾಗ ರಾಮ-ಸೀತೆಯ ವಿಗ್ರಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಊರಿನವರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗ್ರಾಮವರು ಹೇಳುವ ಪ್ರಕಾರ, ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಹಿಂದೆ ದೇವಾಲಯವಿತ್ತು. ಆ ಜಾಗವನ್ನ ಬಹಳ ಹಿಂದೆಯೇ ರಾಜರ ಆಳ್ವಿಕೆಯ ಕಾಲದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಅನೇಕರು ಸ್ಥಳಕ್ಕೆ ಆಗಮಿಸಿ ದೊಡ್ಡ ಜನಸಂದಣಿ ಉಂಟಾಯಿತು.
ಹಿಂದೂಗಳು ಹಾಗೂ ಮುಸ್ಲಿಂ ಮುಖಂಡರು ತಮ್ಮ ತಮ್ಮ ವಾದ ಮಂಡಿಸಿದ್ದಾರೆ. ಆದರೆ, ಇತಿಹಾಸಜ್ಞರು ಅದನ್ನು ಖಚಿತಪಡಿಸಬೇಕಿದೆ.ಯಾವುದೇ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗುವ ಸೂಕ್ಷ್ಮತೆಯನ್ನು ಅರಿತಿರುವ ಪೊಲೀಸರು ಕೂಡಲೇ ಭೂಮಿಯಲ್ಲಿ ಸಿಕ್ಕಿರುವ ವಿಗ್ರಹಕ್ಕೆ ಬಟ್ಟೆ ಕಟ್ಟಿ ಅದನ್ನು ವಶಕ್ಕೆ ಪಡೆದೊಯ್ದಿದ್ದಾರೆ.
