ಉದಯವಾಹಿನಿ, ಮುಂಬೈ (ಮಹಾರಾಷ್ಟ್ರ): ಬಲವಂತ, ಮೋಸದ ಧಾರ್ಮಿಕ ಮತಾಂತರಗಳನ್ನು ತಡೆಯುವ ಗುರಿ ಹೊಂದಿರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2026′ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸಿದೆ. ಮಸೂದೆಯ ಮೇಲೆ ಸುಮಾರು 5 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಸೋಮವಾರ ರಾತ್ರಿ ಅಂಗೀಕರಿಸಲಾಯಿತು. ಇಂದು (ಮಂಗಳವಾರ) ವಿಧಾನ ಪರಿಷತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ.’ಯಾವುದೇ ಧರ್ಮದ ವಿರುದ್ಧದ ಅಸ್ತ್ರವಲ್ಲ’: ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅದರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್ ಅವರು, “ಇದು ಯಾವುದೇ ಧರ್ಮದ ವಿರುದ್ಧದ ತಂದ ಕಾನೂನಲ್ಲ. ಬಲವಂತದ, ಮೋಸದ ಹಾಗೂ ಆಮಿಷಗಳನ್ನೊಡ್ಡಿ ಮತಾಂತರ ಮಾಡುವವರನ್ನು ಹಣಿಯಲು ಈ ಕಾನೂನು ರೂಪಿಸಲಾಗಿದೆ. ಇದು ಎಲ್ಲರಿಗೂ, ಎಲ್ಲ ಧರ್ಮಗಳ ಆಚರಣೆಗೆ ಅವಕಾಶ ನೀಡುತ್ತದೆ” ಎಂದು ತಿಳಿಸಿದರು.
“ಈ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯು ಈಗಾಗಲೇ ಒಡಿಶಾ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ ಮತ್ತು ಜಾರ್ಖಂಡ್ ಸೇರಿ 12 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಧಾರ್ಮಿಕ ಮತಾಂತರದ ಪ್ರಕರಣಗಳು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿವೆ. ಇವುಗಳನ್ನು ನಿಯಂತ್ರಿಸಲು ಈ ಕಾನೂನನ್ನು ಪರಿಚಯಿಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಹೇಳಿದರು.
“ದೇಶದ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದರೂ, ಬಲವಂತದ ಮತಾಂತರಗಳನ್ನು ತಡೆಗಟ್ಟಲು ಈ ಕಾನೂನು ತರುವುದು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದರ ಅನುಸಾರವಾಗಿ ಬಲವಂತ, ಮೋಸ, ವಂಚನೆ, ಆಮಿಷಗಳ ವಿರುದ್ಧವಾಗಿ ಈ ಕಾನೂನುಗಳನ್ನು ರೂಪಿಸಲಾಗಿದೆ” ಎಂದರು.
ಉದ್ಧವ್ ಬಣದ ಶಿವಸೇನೆ ಬೆಂಬಲ: ಮಸೂದೆಯ ಕುರಿತು ವಿಪಕ್ಷಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ಧಾರ್ಮಿಕ ಮತಾಂತರ ನಿಯಂತ್ರಣ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಶರದ್ ಪವಾರ್ ಬಣದ ಎನ್ಸಿಪಿ ವಿರೋಧ ವ್ಯಕ್ತಪಡಿಸಿವೆ.
ಹೊಸ ಮಸೂದೆಯಲ್ಲಿ ಶಿಕ್ಷೆಯ ಪ್ರಮಾಣ ಹೀಗಿದೆ: ಬಲವಂತ, ಮೋಸ, ಆಮಿಷ ಮತ್ತು ಮದುವೆಯ ಕಾರಣಕ್ಕಾಗಿ ಮತಾಂತರ ಮಾಡುವುದನ್ನು ಈ ಮಸೂದೆಯು ನಿರ್ಬಂಧಿಸುತ್ತದೆ. ಮತಾಂತರದಲ್ಲಿ ತೊಡಗಿಕೊಂಡ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಇದರಲ್ಲಿ ಪ್ರಸ್ತಾಪಿಸಲಾಗಿದೆ.
ಮದುವೆಯ ಕಾರಣಕ್ಕಾಗಿ ಕಾನೂನು ಬಾಹಿರವಾಗಿ ಮತಾಂತರಕ್ಕೆ ಮುಂದಾದರೆ, ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಪ್ರಸ್ತಾಪ ಕಾಯ್ದೆಯಲ್ಲಿದೆ.
